ಡಿ.ಸಿ.ಪ್ರಕಾಶ್, ಸಂಪಾದಕರು
ಬೆಂಗಳೂರು, ಆ. 3: ಬೆಂಗಳೂರಿನ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಆರ್ ಇನ್ ಹೋಟೆಲ್ನಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರವ್ಯಾಪಿ “ಸಂಘಟನ ಸೃಜನ್ ಅಭಿಯಾನ”ಕ್ಕೆ ಇಂದು ಚಾಲನೆ ನೀಡಲಾಯಿತು. ಎಐಸಿಸಿ ವೀಕ್ಷಕರಾದ ಟೋನಿ ಚಮ್ಮನಿ (ವೈಪೀನ್ ಕ್ಷೇತ್ರದ ಶಾಸಕ, ಎರ್ನಾಕುಲಂ ಜಿಲ್ಲೆ) ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಎಂ.ಸಿ.ಸುಧಾಕರ್, ಹೆಚ್.ನಾಗೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷದ ಸಂಘಟನ ಸೃಜನ್ ಅಭಿಯಾನ (Sangathan Srijan Abhiyan)ವು ಬೂತ್ ಮಟ್ಟದಿಂದಲೇ ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಹೊಸ ನಾಯಕತ್ವವನ್ನು ಗುರುತಿಸುವುದು ಹಾಗೂ ತಳಮಟ್ಟದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ಸಾಂಸ್ಥಿಕ ಅಭಿಯಾನವಾಗಿದೆ.
ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಬೂತ್, ವಾರ್ಡ್, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಎಐಸಿಸಿ ವೀಕ್ಷಕರ ಮೂಲಕ ಜಿಲ್ಲಾ ಹಾಗೂ ಸ್ಥಳೀಯ ನಾಯಕತ್ವಕ್ಕೆ ಅರ್ಹರನ್ನು ಪಾರದರ್ಶಕವಾಗಿ ಆಯ್ಕೆ ಮಾಡುವುದು, ಸಾಮಾನ್ಯ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡುವುದು ಹಾಗೂ ಮಹಿಳೆಯರು ಮತ್ತು ಯುವಕರಿಗೆ ನಾಯಕತ್ವದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಸೇರಿವೆ.

ನಾಯಕತ್ವ ಆಯ್ಕೆ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಕುತೂಹಲ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸಿ ಒಂಬತ್ತು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಹಾಗೂ ಡಿ.ಕೆ.ಮೋಹನ್ ಬಾಬು ಅವರು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಐದು ತಿಂಗಳು ಕೂಡ ಪೂರ್ಣಗೊಳ್ಳದಿರುವ ಸಂದರ್ಭದಲ್ಲಿ, ಎಐಸಿಸಿ ವೀಕ್ಷಕರ ಮೂಲಕ ಜಿಲ್ಲಾ ಮತ್ತು ಸ್ಥಳೀಯ ನಾಯಕತ್ವ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕುತೂಹಲ ಹಾಗೂ ತಳಮಳ ಮೂಡಿಸಿರುವುದು ಸಭೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಕಷ್ಟದ ಕಾಲದಲ್ಲಿ ಪಕ್ಷ ಉಳಿಸಿದ ನಾಯಕತ್ವ
ಕೆ.ಆರ್.ಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಹಾಗೂ ಸಚಿವರಾಗಿದ್ದ ಬೈರತಿ ಬಿ.ಎ.ಬಸವರಾಜ ಅವರು ಬಿಜೆಪಿ ಸೇರ್ಪಡೆಯಾದ ಬಳಿಕ, ಅವರೊಂದಿಗೆ ಸುಮಾರು ಶೇ.80 ರಷ್ಟು ಕಾಂಗ್ರೆಸ್ ಕಾರ್ಯಕರ್ತರೂ ಬಿಜೆಪಿ ಸೇರಿದ್ದರು ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿತ್ತು.
ಅಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಪಕ್ಷದ ಸಂಘಟನೆಯನ್ನು ಉಳಿಸಿ, ಕಾಂಗ್ರೆಸ್ಗೆ ಮತ್ತೆ ಜೀವ ತುಂಬುವ ಕೆಲಸವನ್ನು ಡಿ.ಕೆ.ಮೋಹನ್ ಬಾಬು ಹಾಗೂ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು ನಡೆಸಿದರು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಚುನಾವಣೆಗೆ ಒಂದು ವಾರವೇ ಬಾಕಿ ಇದ್ದ ಸಂದರ್ಭದಲ್ಲಿ ಡಿ.ಕೆ.ಮೋಹನ್ ಬಾಬು ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿ ಸ್ಪರ್ಧಿಸುವ ಅವಕಾಶವನ್ನು ಒದಗಿಸಿಕೊಟ್ಟಿತು. ಆ ಚುನಾವಣೆಯಲ್ಲಿ ಡಿ.ಕೆ.ಮೋಹನ್ ಬಾಬು ಅವರು ಸೋತಿದ್ದರೂ ಅವರು ಪಡೆದ ಮತಗಳು 1 ಲಕ್ಷದ 15 ಸಾವಿರದ 624 ಮತಗಳು. ಬರೀ 24 ಸಾವಿರದ 301 ಮತಗಳ ಅಂತರದಲ್ಲಿ ಸೋತು. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆಯೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿ ತೋರಿಸಿದರು.
2023ರ ಚುನಾವಣೆಯ ನಂತರ ಬದಲಾದ ರಾಜಕೀಯ ವಾತಾವರಣ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಡಿ.ಕೆ.ಮೋಹನ್ ಬಾಬು ಅವರು 1,15,624 ಮತಗಳನ್ನು ಪಡೆದು ಕೇವಲ 24,301 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಸೋಲಿನ ನಡುವೆಯೂ ಕೆ.ಆರ್.ಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬಲವಾದ ಮತಬ್ಯಾಂಕ್ ಇದೆ ಎಂಬುದನ್ನು ಆ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿತ್ತು.
ಅಂದಿನಿಂದ ಇಲ್ಲಿಯವರೆಗೆ ಕೆ.ಆರ್.ಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಗೆ ಡಿ.ಕೆ.ಮೋಹನ್ ಬಾಬು ಹೊಸ ಚೈತನ್ಯ ನೀಡಿದ್ದು, ಬಿಜೆಪಿ ಸೇರಿದ್ದ ಹಳೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಹುತೇಕರು ಮತ್ತೆ ಕಾಂಗ್ರೆಸ್ಗೆ ಮರಳಿದ್ದಾರೆ ಎಂದು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಹೇಳುತ್ತಿದ್ದಾರೆ. ಬೆಂಗಳೂರು ಪೂರ್ವ ನಗರ ಪಾಲಿಕೆ (ಕೆ.ಆರ್.ಪುರಂ–ಮಹದೇವಪುರ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಇದೇ ಬೆಳವಣಿಗೆಗೆ ಸಾಕ್ಷಿಯಾಗಿವೆ.

“ಇಂದೇ ಚುನಾವಣೆ ನಡೆದರೂ 50 ಸಾವಿರ ಮತಗಳ ಅಂತರದಲ್ಲಿ ಗೆಲುವು” ಎಂಬ ಕಾರ್ಯಕರ್ತರ ವಿಶ್ವಾಸ
ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಈಗ ಒಂದು ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.
“ಇಂದೇ ಚುನಾವಣೆ ಘೋಷಣೆಯಾಗಿ, ನಾಳೆಯೇ ಮತದಾನ ನಡೆದು, ನಾಳಿದ್ದೇ ಫಲಿತಾಂಶ ಪ್ರಕಟವಾದರೂ ಡಿ.ಕೆ.ಮೋಹನ್ ಬಾಬು ಅವರು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ.”
ಕಾರ್ಯಕರ್ತರು ಈ ವಿಶ್ವಾಸ ವ್ಯಕ್ತಪಡಿಸಲು ಹಲವು ಕಾರಣಗಳನ್ನು ಮುಂದಿಡುತ್ತಿದ್ದಾರೆ. ಅಭಿವೃದ್ಧಿಯಾಗದ ರಸ್ತೆಗಳು, ಸಮರ್ಪಕವಾಗಿ ವಿಲೇವಾರಿಯಾಗದ ಕಸ, ರಸ್ತೆಗಳ ಮೇಲೆ ಹರಿಯುತ್ತಿರುವ ಒಳಚರಂಡಿ ನೀರು, ಅಪರಾಧ ಚಟುವಟಿಕೆಗಳ ಏರಿಕೆ, ಭೂ ಮಾಫಿಯಾ, ಕೊಲೆ ಹಾಗೂ ದರೋಡೆ ಪ್ರಕರಣಗಳಿಂದ ಕ್ಷೇತ್ರದ ಜನರಲ್ಲಿ ಅಸಮಾಧಾನ ಹೆಚ್ಚಿದ್ದು, ಅಧಿಕಾರ ಬದಲಾವಣೆಯ ಪರ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ ಎಂಬುದು ಅವರ ವಾದವಾಗಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, “ಡಿ.ಕೆ.ಮೋಹನ್ ಬಾಬು ಅವರು ವಿದ್ಯಾವಂತರು, ಸುಸಂಸ್ಕೃತರು, ಸೌಮ್ಯ ಸ್ವಭಾವದವರು, ಪ್ರಗತಿಪರ ಚಿಂತಕರು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ನಾಯಕತ್ವ ಅವರದ್ದು. ಇಂತಹವರು ಶಾಸಕರಾಗಬೇಕು” ಎಂಬ ಅಭಿಪ್ರಾಯವೂ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಅಭಿಯಾನದಿಂದ ಗೊಂದಲ ಸೃಷ್ಟಿಯಾಗುವ ಆತಂಕವೂ ಇದೆ
ಇದೇ ಸಂದರ್ಭದಲ್ಲಿ ಎಐಸಿಸಿ ವೀಕ್ಷಕರ ಮೂಲಕ ಜಿಲ್ಲಾ ಹಾಗೂ ಸ್ಥಳೀಯ ನಾಯಕತ್ವವನ್ನು ಪಾರದರ್ಶಕವಾಗಿ ಆಯ್ಕೆ ಮಾಡುವ ಉದ್ದೇಶದೊಂದಿಗೆ ನಡೆಯುತ್ತಿರುವ ಸಂಘಟನ ಸೃಜನ್ ಅಭಿಯಾನವನ್ನು ಪಕ್ಷದೊಳಗಿನ ಕೆಲವು ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಕೆಲವು ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ, ಕೆ.ಆರ್.ಪುರಂ ಕಾಂಗ್ರೆಸ್ನಲ್ಲಿ ಸಂಘಟನಾ ಚಟುವಟಿಕೆಗಳು ವೇಗ ಪಡೆದುಕೊಂಡಿರುವುದು, ಹಳೆಯ ಕಾರ್ಯಕರ್ತರ ಮರಳುವಿಕೆ ಹಾಗೂ ಡಿ.ಕೆ.ಮೋಹನ್ ಬಾಬು ಅವರ ನಾಯಕತ್ವದ ಬಗ್ಗೆ ಕಾರ್ಯಕರ್ತರಲ್ಲಿ ವ್ಯಕ್ತವಾಗುತ್ತಿರುವ ವಿಶ್ವಾಸವು ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.














