ಖಾಸಿಂ ಸಾಬ್. ಎ, ಚಿಂತಕರು, ಬೆಂಗಳೂರು
ಭಾರತದಲ್ಲಿ “ಅಲ್ಪಸಂಖ್ಯಾತ” ಎಂಬ ಪದ ಕೇಳಿದ ತಕ್ಷಣ ಚರ್ಚೆ ಧರ್ಮದ ಸುತ್ತ ಸುತ್ತುತ್ತದೆ. ಆದರೆ ಅಲ್ಪಸಂಖ್ಯಾತರ ಪರಿಕಲ್ಪನೆಯನ್ನು ಕೇವಲ ಜನಸಂಖ್ಯೆಯ ಲೆಕ್ಕಾಚಾರಕ್ಕೆ ಸೀಮಿತಗೊಳಿಸುವುದು ಅದರ ಐತಿಹಾಸಿಕ, ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಅರ್ಥವನ್ನು ಕುಗ್ಗಿಸುವಂತಾಗಿದೆ. ಅಲ್ಪಸಂಖ್ಯಾತರು ಎಂದರೆ ಸಂಖ್ಯೆಯಲ್ಲಿ ಕಡಿಮೆ ಇರುವ ಜನರಲ್ಲ ಬದಲಿಗೆ ತಮ್ಮ ಗುರುತು, ಭಾಷೆ, ಸಂಸ್ಕೃತಿ, ಧರ್ಮ ಮತ್ತು ಸಮಾನ ಅವಕಾಶಗಳನ್ನು ಸಂರಕ್ಷಿಸಿಕೊಳ್ಳಲು ಸಾಂವಿಧಾನಿಕ ಭದ್ರತೆಯ ಅಗತ್ಯವಿರುವ ಸಮುದಾಯಗಳು.
ಜಗತ್ತಿನ ಅನುಭವವೇ ಇದನ್ನು ಸ್ಪಷ್ಟಪಡಿಸುತ್ತದೆ. ಬ್ರಿಟನ್ ಬಹುಸಾಂಸ್ಕೃತಿಕತೆಯನ್ನು ಪ್ರಜಾಪ್ರಭುತ್ವದ ಶಕ್ತಿಯೆಂದು ಸ್ವೀಕರಿಸಿದೆ. ಅಮೆರಿಕ ಇತಿಹಾಸಾತ್ಮಕ ಅನ್ಯಾಯಗಳನ್ನು ಸರಿಪಡಿಸಲು ಸಮಾನ ಅವಕಾಶದ ನೀತಿಗಳನ್ನು ಅನುಸರಿಸಿದೆ. ರಷ್ಯಾ ತನ್ನ ಬಹುಜನಾಂಗೀಯ ವಾಸ್ತವವನ್ನು ಒಪ್ಪಿಕೊಂಡು ಪ್ರಾದೇಶಿಕ ಸ್ವಾಯತ್ತತೆಯ ವ್ಯವಸ್ಥೆ ರೂಪಿಸಿದೆ. ಈ ಎಲ್ಲಾ ಮಾದರಿಗಳು ಹೇಳುವ ಸಂದೇಶ ಒಂದೇ. ಈ ಮೂಲಕ ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದು ರಾಷ್ಟ್ರವನ್ನು ದುರ್ಬಲಗೊಳಿಸುವುದಿಲ್ಲ ಬದಲಿಗೆ ಅದನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ.
ಭಾರತದ ಸಂವಿಧಾನವೂ ಇದೇ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ವಿಧಿ 14, 15 ಮತ್ತು 16 ಸಮಾನತೆಯನ್ನು ಖಾತರಿಪಡಿಸಿದರೆ, ವಿಧಿ 25 ಧರ್ಮಸ್ವಾತಂತ್ರ್ಯವನ್ನು, ವಿಧಿ 29 ಮತ್ತು 30 ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣ ಸಂಸ್ಥೆಗಳ ರಕ್ಷಣೆಯನ್ನು ಖಚಿತಪಡಿಸುತ್ತವೆ. ಆದ್ದರಿಂದ ಅಲ್ಪಸಂಖ್ಯಾತರ ಹಕ್ಕುಗಳು ಯಾವುದೇ “ವಿಶೇಷ ಸೌಲಭ್ಯ”ಗಳಲ್ಲ ಅವು ಭಾರತೀಯ ಪ್ರಜಾಪ್ರಭುತ್ವದ ಸಮತೋಲನವನ್ನು ಕಾಯುವ ಸಾಂವಿಧಾನಿಕ ಸಾಧನಗಳಾಗಿವೆ.
ಡಾ. ಬಿ.ಆರ್. ಅಂಬೇಡ್ಕರ್ ಪ್ರಜಾಪ್ರಭುತ್ವವನ್ನು ಬಹುಸಂಖ್ಯಾತರ ಆಡಳಿತ ಎಂದು ವ್ಯಾಖ್ಯಾನಿಸಲಿಲ್ಲ. ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವದ ಯಶಸ್ಸು ಅಲ್ಪಸಂಖ್ಯಾತರ ಭದ್ರತೆಯಲ್ಲಿ ಅಡಗಿದೆ. ಈ ಕಾರಣಕ್ಕಾಗಿಯೇ ಸಂವಿಧಾನವು ಬಹುಸಂಖ್ಯಾತರ ಅಧಿಕಾರಕ್ಕೆ ಸಮಾನಾಂತರವಾಗಿ ಅಲ್ಪಸಂಖ್ಯಾತರ ಹಕ್ಕುಗಳಿಗೂ ಭದ್ರತೆಯ ಚೌಕಟ್ಟನ್ನು ನಿರ್ಮಿಸಿತು. ಬಹುಮತದ ಆಡಳಿತ ಮತ್ತು ಸಂವಿಧಾನದ ಆಡಳಿತ ಒಂದೇ ಅಲ್ಲ ಎಂಬುದನ್ನು ಈ ವ್ಯವಸ್ಥೆ ನೆನಪಿಸುತ್ತದೆ.
ದುರದೃಷ್ಟವಶಾತ್, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪ್ರಶ್ನೆ ಸಂವಿಧಾನದ ನೆಲೆಯಿಂದ ಜಾರಿಬಿದ್ದು ರಾಜಕೀಯ ಘೋಷಣೆಗಳ ವಿಷಯವಾಗಿ ಪರಿಣಮಿಸಿದೆ. ಹಕ್ಕುಗಳನ್ನು ‘ವಿಶೇಷಾಧಿಕಾರ’ ಎಂದು ಬಿಂಬಿಸುವ ಪ್ರಯತ್ನಗಳು ಹೆಚ್ಚುತ್ತಿವೆ. ಆದರೆ ಯಾವುದೇ ಪ್ರಜಾಪ್ರಭುತ್ವದಲ್ಲಿ ದುರ್ಬಲ ಸಮುದಾಯಗಳಿಗೆ ರಕ್ಷಣೆ ನೀಡುವುದು ಸಮಾನತೆಯ ವಿರುದ್ಧವಲ್ಲ ಅದು ಸಮಾನತೆಯನ್ನು ಅರ್ಥಪೂರ್ಣವಾಗಿಸುವ ಕ್ರಮವಾಗಿದೆ.
ಇದೇ ಸಂದರ್ಭದಲ್ಲಿ ಬಹುಜನ ರಾಜಕೀಯದ ಚರ್ಚೆಯೂ ಮಹತ್ವ ಪಡೆಯುತ್ತದೆ. ಕಾನ್ಶಿರಾಮ್ ಮತ್ತು ನಂತರ BAMCEF ಮೂಲಕ ವಾಮನ್ ಮೇಶ್ರಾಮ್ ಪ್ರತಿಪಾದಿಸಿದ ಬಹುಜನ ಪರಿಕಲ್ಪನೆಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ವಂಚಿತ ಸಮುದಾಯಗಳ ಒಕ್ಕೂಟದ ಮೇಲೆ ನಿಂತಿದೆ. ಈ ಚಿಂತನೆಯಲ್ಲಿ ಮುಸ್ಲಿಮರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಸಾಮಾಜಿಕ ನ್ಯಾಯದ ಹೋರಾಟದ ಸಹಜ ಪಾಲುದಾರರಾಗಿ ಕಾಣುವ ಪ್ರಯತ್ನವಿದೆ. ಈ ಪರಿಕಲ್ಪನೆ ಕುರಿತು ಭಿನ್ನಾಭಿಪ್ರಾಯಗಳು ಸಹಜವಾದರೂ, ಸಾಮಾಜಿಕ ನ್ಯಾಯದ ರಾಜಕಾರಣದಲ್ಲಿ ವಂಚಿತರ ನಡುವಿನ ಸಹಕಾರದ ಸಾಧ್ಯತೆಯನ್ನು ಅದು ನಿರಂತರವಾಗಿ ಮುಂದಿಡುತ್ತದೆ.
ಭಾರತದ ಬಹುತ್ವ ಸಮಾಜದ ಶಕ್ತಿಯೇ ಅದರ ವೈವಿಧ್ಯತೆ. ಆ ವೈವಿಧ್ಯತೆಯನ್ನು ಅನುಮಾನದಿಂದ ನೋಡುವುದಕ್ಕಿಂತ ಸಂವಿಧಾನದ ಬೆಳಕಿನಲ್ಲಿ ಅರ್ಥಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳು ಯಾವುದೇ ಸಮುದಾಯಕ್ಕೆ ನೀಡಿದ ದಾನವಲ್ಲ; ಅವು ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನ ರಚನೆ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಯ ಫಲವಾಗಿ ರೂಪುಗೊಂಡ ಹಕ್ಕುಗಳು.
ಒಂದು ರಾಷ್ಟ್ರದ ನಿಜವಾದ ಶಕ್ತಿಯನ್ನು ಅದರ ಬಹುಸಂಖ್ಯಾತರ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ. ಅಲ್ಪಸಂಖ್ಯಾತರು ಎಷ್ಟು ಸುರಕ್ಷಿತರಾಗಿದ್ದಾರೆ, ಅವರಿಗೆ ಶಿಕ್ಷಣ, ಉದ್ಯೋಗ, ಸಂಸ್ಕೃತಿ ಮತ್ತು ರಾಜಕೀಯದಲ್ಲಿ ಎಷ್ಟು ಸಮಾನ ಅವಕಾಶಗಳಿವೆ ಎಂಬುದೇ ಆ ರಾಷ್ಟ್ರದ ನಾಗರಿಕತೆಯ ನಿಜವಾದ ಮಾನದಂಡ. ಸಂವಿಧಾನದ ಆಶಯವೂ ಇದೇ. ವೈವಿಧ್ಯತೆಯನ್ನು ಗೌರವಿಸುವ ಭಾರತವೇ ಬಲಿಷ್ಠ ಭಾರತ; ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಭಾರತವೇ ಪ್ರಜಾಪ್ರಭುತ್ವದ ಆತ್ಮವನ್ನು ಉಳಿಸಿಕೊಳ್ಳುವ ಭಾರತವಾಗಿದೆ.














