ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ರಾಜಕೀಯ ಕುರಿತು ನೀಡಿದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಮಾಜ ಸೇವಕ ಹಾಗೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಅಗರ ಪ್ರಕಾಶ್ ಅವರು ಪ್ರಧಾನಿಯ ಮಾತುಗಳನ್ನು ಕಟುವಾಗಿ ಖಂಡಿಸಿದ್ದಾರೆ.
ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಎಕ್ಸ್’ ಸೈಟ್ ನಲ್ಲಿ “ಇಂದು ತಮಿಳುನಾಡಿನ ಸ್ಥಿತಿಯನ್ನು ನೋಡಿ. 25 ರಿಂದ 30 ವರ್ಷಗಳ ಕಾಲ ಕಾಂಗ್ರೆಸ್ ಡಿಎಂಕೆ ಜೊತೆ ಆಪ್ತ ಸಂಬಂಧ ಹೊಂದಿತ್ತು. ಹಲವಾರು ಬಾರಿ ಡಿಎಂಕೆಯ ಮೈತ್ರಿಯೇ ಕಾಂಗ್ರೆಸ್ ಅನ್ನು ಸಂಕಷ್ಟದಿಂದ ಪಾರು ಮಾಡಿತ್ತು. 2014ರ ಮುನ್ನ 10 ವರ್ಷ ಆಡಳಿತ ನಡೆಸಿದ ಸರ್ಕಾರವೂ ಬಹುಪಾಲು ಡಿಎಂಕೆಯ ಬೆಂಬಲದಿಂದ ಉಳಿದಿತ್ತು. ಆದರೆ ರಾಜಕೀಯ ಗಾಳಿ ಬದಲಾಗುತ್ತಿದ್ದಂತೆಯೇ, ಕಾಂಗ್ರೆಸ್ ಅದೇ ಡಿಎಂಕೆಗೆ ಬೆನ್ನಿಗೆ ಚೂರಿ ಹೊಡೆದಿದೆ. ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಮೊದಲ ಅವಕಾಶದಲ್ಲೇ ದ್ರೋಹ ಮಾಡಿತು. ಈಗ ಮತ್ತೆ ರಾಜಕೀಯವಾಗಿ ಬದುಕಲು ಇನ್ನೊಂದು ಪಕ್ಷದ ಬೆನ್ನೇರಬೇಕಾಗಿದೆ…” ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅಗರ ಪ್ರಕಾಶ್ ಅವರು, ತಮಿಳುನಾಡಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ಸಿ.ಜೋಸಪ್ ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ನಿರಾಕರಿಸಿ 5 ದಿನಗಳಿಂದ ಅವಕಾಶ ನಿರಾಕರಿಸಿರುವುದನ್ನು ಪ್ರಶ್ನಿಸಿದ್ದಾರೆ.

“ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ (108) ಹೊರಹೊಮ್ಮಿದ ವಿಜಯ್ ಅವರು ಮೂರು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಆಹ್ವಾನಿಸುವಂತೆ ಮನವಿ ಮಾಡಿಕೊಂಡರು. ತಮ್ಮ ಮೆಜಾರಿಟಿಯನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸುವುದಾಗಿಯೂ ತಿಳಿಸಿದ್ದರು. ಆದರೂ ಅವರಿಗೆ ಅವಕಾಶ ನೀಡಲಿಲ್ಲ. ತಮಿಳುನಾಡು ರಾಜ್ಯಪಾಲರನ್ನು ದೆಹಲಿಯಿಂದ ನಿಯಂತ್ರಿಸಿದ್ದು ಯಾರು?” ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ, ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಹಿಂಬಾಗಿಲಿನಿಂದ ಅಧಿಕಾರಕ್ಕೆ ತರುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ವಿಜಯ್ ಅವರು ಮುಖ್ಯಮಂತ್ರಿ ಆಗುವುದನ್ನು ತಡೆಯಲು, ಎಐಡಿಎಂಕೆಯನ್ನು ಬಳಸಿಕೊಂಡು ಬಿಜೆಪಿ ಮೈತ್ರಿ ಸರ್ಕಾರವನ್ನು ಅಡ್ಡದಾರಿಯಲ್ಲಿ ತರಲು ಯತ್ನಿಸಲಾಯಿತು. ಯಾರಿಗೂ ಬಹುಮತ ಇಲ್ಲ ಎಂಬ ನೆಪದಲ್ಲಿ ರಾಷ್ಟ್ರಪತಿ ಆಳ್ವಿಕೆ ತರಲು ಕೂಡ ಯೋಜನೆ ರೂಪಿಸಲಾಗಿತ್ತು” ಎಂದು ಆರೋಪಿಸಿದ್ದಾರೆ.
“ತಮಿಳುನಾಡಿನಲ್ಲಿ ಜಾತ್ಯತೀತ ಸರ್ಕಾರ ರಚನೆ ಮಾಡುವ ಮೂಲಕ ಸಂವಿಧಾನ, ಸಾಮಾಜಿಕ ನ್ಯಾಯ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿತ್ತು. ಆ ಕಾರಣದಿಂದಲೇ ಇಂದು ವಿಜಯ್ ಅವರು ತಮಿಳುನಾಡಿನಲ್ಲಿ ಜ್ಯಾತ್ಯತೀತ ಸರ್ಕಾರವನ್ನು ರಚಿಸಿದ್ದಾರೆ. ಈ ತಿಳುವಳಿಕೆ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು, ನಿರಾಸೆಯ ಮಾತುಗಳನ್ನಾಡಿ ಕಾಂಗ್ರೆಸ್ ಡಿಎಂಕೆ ‘ಬೆನ್ನಿಗೆ ಚೂರಿ ಹಾಕಿದೆ’ ಎಂದು ಹೇಳಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ. ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಅಲ್ಲ” ಎಂದು ಕಿಡಿಕಾರಿದ್ದಾರೆ.
“ಪ್ರಧಾನಿ ಮೋದಿ ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು, ಅದನ್ನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಅಗರ ಪ್ರಕಾಶ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.














