ಡಿ.ಸಿ.ಪ್ರಕಾಶ್, ಸಂಪಾದಕರು
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ನಗರೇಶ್ವರ ನಾಗೇನಹಳ್ಳಿ ದಿನ್ನೆ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA) ಹಂತ–3 ಯೋಜನೆಯಡಿ ನಿರ್ಮಿಸಿರುವ 768 (ಜಿ+3) ಮನೆಗಳನ್ನು ಮಂಡಳಿಯ ನಿಯಮಗಳ ಪ್ರಕಾರ ಘೋಷಿತ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡಬೇಕು. ಕೊಳಗೇರಿ ಮಂಡಳಿ ಸ್ಥಾಪನೆಯ ಉದ್ದೇಶವೇ ಕೊಳಗೇರಿ ಜನರ ಪುನರ್ವಸತಿ ಎಂಬುದು ಮೂಲ ತತ್ವ. ಆದ್ದರಿಂದ ಯಾವುದೇ ಯೋಜನೆಯ ಫಲಾನುಭವಿಗಳೂ ಕೊಳಗೇರಿ ನಿವಾಸಿಗಳೇ ಆಗಿರಬೇಕು.
ಯೋಜನೆಯಡಿಯಲ್ಲಿ ರಾಜೀವ್ಗಾಂಧಿ ನಗರ (ದೇವಸಂದ್ರ)ಕ್ಕೆ 107 ಮನೆಗಳು, ಸಂಜಯ್ಗಾಂಧಿ ನಗರ (ದೇವಸಂದ್ರ)ಕ್ಕೆ 245 ಮನೆಗಳು, ರಾಮಮೂರ್ತಿನಗರ ಸರ್ವೆ ನಂ.85ರ ಕೊಳಗೇರಿ ಪ್ರದೇಶಕ್ಕೆ 337 ಮನೆಗಳು ಮತ್ತು ಭಟ್ಟರಹಳ್ಳಿ ಜನತಾ ಕಾಲೋನಿಗೆ 79 ಮನೆಗಳನ್ನು ಹಂಚಿಕೆ ಮಾಡುವ ಉದ್ದೇಶದಿಂದ ಮಂಡಳಿ ಡಿಪಿಆರ್ ಸಿದ್ಧಪಡಿಸಿ ಮನೆಗಳನ್ನು ನಿರ್ಮಿಸಿದೆ. ಆದರೆ, ಈ ಮನೆಗಳನ್ನು ನಿಜವಾದ ಫಲಾನುಭವಿಗಳಿಗೆ ನೀಡುವ ಉದ್ದೇಶ ಮಂಡಳಿಗೆ ಇಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಮನೆಗಳನ್ನು ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ ಸೂಚಿಸುವ ಕಾರ್ಯಕರ್ತರು ಮತ್ತು ಹಿಂಬಾಲಕರಿಗೆ ನೀಡಲು ಯತ್ನ ನಡೆಯುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬೈರತಿ ಬಸವರಾಜ ಅವರು ತಮ್ಮ ಕಾರ್ಯಕರ್ತರಿಂದ 768 ಅರ್ಜಿಗಳನ್ನು ಸಂಗ್ರಹಿಸಿ, ಅವರನ್ನು ನಗರ ಬಡಜನರೆಂದು ತೋರಿಸಿ ಬಿಬಿಎಂಪಿ ಮಹದೇವಪುರ ವಿಭಾಗದ ಕಂದಾಯ ಅಧಿಕಾರಿಗಳಿಂದ “ವಿಶೇಷ ಆಶ್ರಯ ಸಮಿತಿ” ಹೆಸರಿನಲ್ಲಿ ಸಹಿ ಪಡೆದು ಕೊಳಗೇರಿ ಮಂಡಳಿಗೆ ಸಲ್ಲಿಸಿದ್ದಾರೆ ಎಂಬ ಆರೋಪ ಇದೆ. ಪಟ್ಟಿಯಲ್ಲಿರುವವರಲ್ಲಿ ಯಾರೂ ಘೋಷಿತ ಕೊಳಗೇರಿ ನಿವಾಸಿಗಳಲ್ಲ. ಅವರ ವಿಳಾಸ, ಜಾತಿ, ಆದಾಯ ವಿವರಗಳೂ ದಾಖಲಾಗಿಲ್ಲ ಎಂದು ಹೇಳಲಾಗಿದೆ.
ಸರ್ಕಾರ ಅಥವಾ ಕೊಳಗೇರಿ ಮಂಡಳಿ ಕೆ.ಆರ್.ಪುರಂ ಕ್ಷೇತ್ರದಲ್ಲಿ ಯಾವುದೇ ಆಶ್ರಯ ಸಮಿತಿಯನ್ನು ರಚಿಸಿಲ್ಲದಿದ್ದರೂ, ಫಲಾನುಭವಿಗಳ ಪಟ್ಟಿಯಲ್ಲಿ ಬೈರತಿ ಬಸವರಾಜರನ್ನು ಆಶ್ರಯ ಸಮಿತಿ ಅಧ್ಯಕ್ಷರಾಗಿ ಉಲ್ಲೇಖಿಸಲಾಗಿದೆ. ಈ ಪಟ್ಟಿಗೆ ಆಗಿನ ಮಂಡಳಿ ಆಯುಕ್ತ ಬಿ.ವೆಂಕಟೇಶ್ ಸಹಿ ಹಾಕಿರುವುದಾಗಿ ತಿಳಿದುಬಂದಿದ್ದು, ಇದನ್ನು ಅಧಿಕಾರ ದುರುಪಯೋಗ ಮತ್ತು ನಿಯಮ ಉಲ್ಲಂಘನೆ ಎಂದು ಸಂಘಟನೆಗಳು ಆರೋಪಿಸಿವೆ.
ಸಾರ್ವಜನಿಕ ಪ್ರಕಟಣೆ ನೀಡದೇ, ಅರ್ಜಿ ಆಹ್ವಾನಿಸದೇ, ಆಯ್ಕೆ ಪ್ರಕ್ರಿಯೆ ನಡೆಸದೇ ಅಕ್ರಮವಾಗಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಮನೆ ಹಂಚಿಕೆ ಮಾಡುವುದು ಕಾನೂನುಬಾಹಿರ ಎಂದು ಪ್ರಶ್ನಿಸಲಾಗಿದೆ. ಘೋಷಿತ ಕೊಳಗೇರಿ ಜನರಿಗೆ ಮನೆ ನೀಡಬೇಕಾದರೆ ಆಶ್ರಯ ಸಮಿತಿಯ ಅಗತ್ಯವೇನು ಎಂಬ ಪ್ರಶ್ನೆಯೂ ಎದ್ದಿದೆ.
ಈ ಅಕ್ರಮಗಳ ವಿರುದ್ಧ ಶಾಸಕ ಬೈರತಿ ಬಸವರಾಜ ಹಾಗೂ ಮಂಡಳಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು ವಿಚಾರಣೆ ಪ್ರಗತಿಯಲ್ಲಿದೆ. ಸದರಿ ಮನೆಗಳನ್ನು ನಿಜವಾದ ಕೊಳಗೇರಿ ಬಡಜನರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವಸತಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಹಾಗೂ ಮಂಡಳಿ ಆಯುಕ್ತರನ್ನು ಒತ್ತಾಯಿಸಿ ಫ್ರೀಡಂ ಪಾರ್ಕ್ನಲ್ಲಿ ಜನಶಕ್ತಿ ವೇದಿಕೆ ಮತ್ತು ಜನಶಕ್ತಿ ಮಹಿಳಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ, ಇದುವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಮಂಡಳಿಯ ಅಧಿಕಾರಿಗಳು ಮನೆ ಹಂಚಿಕೆ ಪ್ರಕ್ರಿಯೆ ಆರಂಭಿಸುವ ಉದ್ದೇಶದಿಂದ ಡಿ.ಡಿ.ಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಬಿಎ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಮನೆಗಳನ್ನು ತ್ವರಿತವಾಗಿ ಹಂಚಿಕೆ ಮಾಡಿ ಸ್ಥಳೀಯ ಶಾಸಕ ಹಾಗೂ ಅವರ ಪಕ್ಷಕ್ಕೆ ರಾಜಕೀಯವಾಗಿ ಅನುಕೂಲವಾಗುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಇದರಿಂದ ಅಸಮಾಧಾನಗೊಂಡ ಸಂಘಟನೆಗಳು ಆಶ್ರಯ ಸಮಿತಿ ಹೆಸರಿನಲ್ಲಿ ಸಿದ್ಧಪಡಿಸಿದ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸಿ ಮನೆಗಳನ್ನು ನಿಜವಾದ ಕೊಳಗೇರಿ ಬಡಜನರಿಗೆ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಕೊಳಗೇರಿ ಮಂಡಳಿಯ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿರುವ ಸಂಘಟನೆಗಳು, ಅಕ್ರಮ ಹಂಚಿಕೆ ವಿರುದ್ಧದ ಪ್ರತಿಭಟನೆಗಳಿಗೆ ಸರ್ಕಾರ ಸ್ಪಂದಿಸದಿರುವುದನ್ನೂ ಖಂಡಿಸಿವೆ. ಸ್ಥಳೀಯ ಶಾಸಕರು ಸೂಚಿಸುವ ಅನುಕೂಲಸ್ಥರಿಗೆ ಮನೆ ನೀಡಲಾಗುತ್ತಿದೆ ಎಂಬ ಆರೋಪದಿಂದ ಕೊಳಗೇರಿ ಪ್ರದೇಶಗಳಲ್ಲಿ ಅಸಮಾನತೆ ಮತ್ತು ಸಾಮಾಜಿಕ ವಿಭಜನೆ ಹೆಚ್ಚುತ್ತಿದೆ. ಇದರಿಂದ ನಿಜವಾದ ಕೊಳಗೇರಿ ಜನರು ಇನ್ನೂ ಪುನರ್ವಸತಿಗೆ ಕಾಯುತ್ತಿರುವುದು ದುಃಖಕರ ವಾಸ್ತವವಾಗಿದೆ ಎಂದು ಸಂಘಟನೆಗಳು ಹೇಳಿವೆ.















