2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಅವರಿಗೆ ಜಾಮೀನು ನೀಡಬೇಕೆಂದು ಒತ್ತಾಯಿಸಿ ಅಮೆರಿಕದ 8 ಸಂಸತ್ ಸದಸ್ಯರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಅವರಿಗೆ ಪತ್ರ ಬರೆದಿದ್ದು, ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ಉಮರ್ ಖಾಲಿದ್ಗೆ ನ್ಯಾಯಸಮ್ಮತ ಮತ್ತು ವೇಗವಾದ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ-ಪೂರ್ವ ದೆಹಲಿಯಲ್ಲಿ 2020ರಲ್ಲಿ ಸಂಭವಿಸಿದ ಗಲಭೆಗಳ ಹಿನ್ನೆಲೆಯಲ್ಲಿ ಉಮರ್ ಖಾಲಿದ್ ಅವರನ್ನು ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧ ಶಡ್ಯಂತ್ರ, ಗಲಭೆ, ಅಕ್ರಮ ಜಮಾವಣೆ ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಉಮರ್ ಖಾಲಿದ್ ಅವರ ಜಾಮೀನು ಅರ್ಜಿ ಪ್ರಸ್ತುತ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ.
ಈ ಸಂದರ್ಭದಲ್ಲಿ ಡಿಸೆಂಬರ್ 30, 2025 ರಂದು ಬರೆದ ಪತ್ರದಲ್ಲಿ ಅಮೆರಿಕದ ಸಂಸತ್ ಸದಸ್ಯರು, ಉಮರ್ ಖಾಲಿದ್ ಅವರನ್ನು ಕಳೆದ ಐದು ವರ್ಷಗಳಿಂದ UAPA ಕಾಯ್ದೆಯಡಿ ಜಾಮೀನು ನೀಡದೆ ಬಂಧನದಲ್ಲೇ ಇರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇದು ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂಬ ತತ್ವಕ್ಕೆ ವಿರುದ್ಧವಾಗಿರಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಸಮ್ಮತ ಅವಧಿಯೊಳಗೆ ವಿಚಾರಣೆ ನಡೆಸುವ ಅಥವಾ ಬಿಡುಗಡೆ ಮಾಡುವ ವ್ಯಕ್ತಿಯ ಹಕ್ಕುಗಳನ್ನು ಭಾರತ ರಕ್ಷಿಸಬೇಕು. ತಪ್ಪು ಸಾಬೀತಾಗುವವರೆಗೆ ಪ್ರತಿಯೊಬ್ಬರೂ ನಿರಪರಾಧಿಗಳೆಂದು ಪರಿಗಣಿಸಬೇಕೆಂದು ಅವರು ಹೇಳಿದ್ದಾರೆ. ಉಮರ್ ಖಾಲಿದ್ ಹಾಗೂ ಅವರೊಂದಿಗೆ ಬಂಧಿತರಾಗಿರುವವರ ವಿರುದ್ಧ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಬೇಕು ಮತ್ತು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪಾರದರ್ಶಕವಾಗಿ ಮಾಹಿತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಪತ್ರವನ್ನು ಟಾಮ್ ಲಾಂಟೋಸ್ ಮಾನವ ಹಕ್ಕುಗಳ ಆಯೋಗದ ಸಹ-ಅಧ್ಯಕ್ಷರೂ ಆಗಿರುವ ಡೆಮೊಕ್ರಾಟಿಕ್ ಪಕ್ಷದ ಸಂಸದ ಜಿಮ್ ಮೆಕ್ಗವರ್ಣ್ ಹಂಚಿಕೊಂಡಿದ್ದಾರೆ. ಪತ್ರಕ್ಕೆ ಜೇಮಿ ರಾಸ್ಕಿನ್, ಭಾರತೀಯ ಮೂಲದ ಸಂಸದೆ ಪ್ರಮಿಳಾ ಜಯಪಾಲ್, ಜಾನ್ ಶಾಕೋವ್ಸ್ಕಿ, ಲಾಯ್ಡ್ ಡೊಗಟ್, ರಶೀದಾ ತ್ಲೈಬ್, ಕ್ರಿಸ್ ವಾನ್ ಹೋಲೆನ್ ಹಾಗೂ ಪೀಟರ್ ವೆಲ್ಚ್ ಸೇರಿದಂತೆ ಹಲವರು ಸಹಿ ಹಾಕಿದ್ದಾರೆ.
ಇದೇ ಪತ್ರದಲ್ಲಿ, ಡಿಸೆಂಬರ್ ತಿಂಗಳ ಆರಂಭದಲ್ಲಿ ಉಮರ್ ಖಾಲಿದ್ ಅವರ ಪೋಷಕರನ್ನು ಭೇಟಿಯಾದ ವಿಷಯವನ್ನೂ ಅಮೆರಿಕದ ಸಂಸತ್ ಸದಸ್ಯರು ಉಲ್ಲೇಖಿಸಿದ್ದಾರೆ.














