ಬೆಂಗಳೂರು: ‘ಯಲಹಂಕದ ಕೋಗಿಲು ಬಡಾವಣೆಯ ಫಕೀರ ಕಾಲೋನಿಗೆ ಭೇಟಿ ಕೊಟ್ಟಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ತಮ್ಮ ಕೊಳಕು ರಾಜಕೀಯ ಉದ್ದೇಶಗಳಿಗಾಗಿ ಬಡ ಮಹಿಳೆಯನ್ನು ಬೆದರಿಸಿ ಅವಮಾನಿಸಿದ್ದು, ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರು ಹಾಗೂ ವಕೀಲರಾದ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.
ಬಡವರ ದುಃಖ-ದುರಂತದಲ್ಲಿಯೂ ಕೋಮುವಾದದ ಬೀಜ ಬಿತ್ತುವ ಅವರ ಈ ಹೀನ ಮತ್ತು ಅಮಾನವೀಯ ವರ್ತನೆ ಅತ್ಯಂತ ಖಂಡನೀಯ ಎಂದು ಕಿಡಿಕಾರಿದ್ದಾರೆ.
ಸೂರು ಕಳೆದುಕೊಂಡ ಸಂತ್ರಸ್ತರಿಗೆ ಧೈರ್ಯ ಹೇಳಬೇಕಾದ ವಿರೋಧ ಪಕ್ಷದ ನಾಯರೊಬ್ಬರಿಂದ ಸಂತ್ರಸ್ತರಿಗೆ ಅವಮಾನಗೊಳಿಸಿ, ಅವರನ್ನು ಹೊರ ದೇಶದವರು ಎಂದು ಹೀಯಾಳಿಸುವುದು ನಮ್ಮ ರಾಜ್ಯದ ದೊಡ್ಡ ದುರಂತ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಆರ್.ಅಶೋಕ್ ಅವರು ಸಂಘ ಪರಿವಾರದ ನಾಯಕರನ್ನು ಮೆಚ್ಚಿಸಲು ಭೇಟಿ ಕೊಟ್ಟಿದ್ದೂ ಅಲ್ಲದೆ, ಮುಸ್ಲಿಂ ಮಹಿಳೆಯೊಬ್ಬರು ಅರೆಬರೆ ಕನ್ನಡ ಮಾತಾಡಿದ್ದನ್ನು ನೆಪವಾಗಿಸಿಕೊಂಡು, ಅವರ ನಾಗರಿಕತೆಯನ್ನು ಪ್ರಶ್ನಿಸುವುದನ್ನು ನೋಡಿದರೆ, ಅವರ ಮುಸ್ಲಿಂ ವಿರೋಧಿ ಧೋರಣೆ ಎಷ್ಟರಮಟ್ಟಿಗೆ ಇದೆ ಎಂಬುದು ಅರ್ಥವಾಗುತ್ತದೆ. ಇಷ್ಟು ದಿನ ಪಾಕಿಸ್ತಾನದ ಜಪ ಮಾಡುತ್ತಿದ್ದ ಬಿಜೆಪಿ ಸಂಘ ಪರಿವಾರದ ನಾಯಕರು ಈಗ ಬಾಂಗ್ಲಾದೇಶದ ಜಪ ಮಾಡುತ್ತಿದ್ದಾರೆ. ಅವರ ಉದ್ದೇಶ ಸ್ಪಷ್ಟವಾಗಿದೆ. ಮುಂದಿನ ಪಶ್ಚಿಮ ಬಂಗಾಳ ಚುನಾವಣೆ ಗೆಲ್ಲಲು ಬಿಜೆಪಿಯೇತರ ರಾಜ್ಯಗಳಲ್ಲಿ ಬಾಂಗ್ಲಾದೇಶದ ನಿವಾಸಿಗಳು ನೆಲೆಸಿದ್ದಾರೆ ಎಂದು ಗುಲ್ಲೆಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೋಗಿಲು ಲೇಔಟ್ ಬಗ್ಗೆ ಕೇರಳ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದನ್ನು ನೆಪವಾಗಿಟ್ಟುಕೊಂಡ ಆರ್.ಅಶೋಕ್, ‘ಕೋಗಿಲು ಕ್ರಾಸ್ನ ಫಕೀರ್ ಬಡಾವಣೆ ಕ್ರಮೇಣ ಸ್ಲೀಪರ್ ಸೆಲ್ಗಳ ಕೇಂದ್ರವಾಗುವ ಅಪಾಯವಿದೆ. ಬಾಂಗ್ಲಾದವರಿಂದಾಗಿ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದೆ. ಮುಂದೆ ಕರ್ನಾಟಕವೂ ಹೀಗೆಯೇ ಆಗಲಿದೆ. ಆದ್ದರಿಂದ, ಮೊದಲು ಇಲ್ಲಿನವರ ಪೌರತ್ವ ಪರಿಶೀಲಿಸುವ ಕಾರ್ಯ ಆಗಬೇಕು’ ಎಂದು ಹೇಳಿದ್ದಾರೆ. ಇದು ಖಂಡನೀಯ.
ಅಕ್ರಮ ಬಾಂಗ್ಲಾ ನಿವಾಸಿಗಳು ಭಾರತಕ್ಕೆ ಬರಬೇಕಾದರೆ ದೇಶದಲ್ಲಿನ ಗೃಹ ಸಚಿವರು ವೈಫಲ್ಯ ಕಾರಣವಲ್ಲವೇ? ಹಾಗಾದರೆ, ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.














