ನವದೆಹಲಿ: ಭಾರತದಲ್ಲಿ ಕಾನೂನುಬದ್ಧವಾಗಿ ಹುಡುಕಲಾಗುತ್ತಿರುವ ಅಪರಾಧಿಗಳು ಹಾಗೂ ದೇಶದಿಂದ ಪರಾರಿಯಾದವರನ್ನು ಮರಳಿ ದೇಶಕ್ಕೆ ಕರೆತರುವುದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಭಾರತದ ಖ್ಯಾತ ಉದ್ಯಮಿ ವಿಜಯ್ ಮಲ್ಯಾ, ವಿವಿಧ ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೆ 2016ರಲ್ಲಿ ಭಾರತದಿಂದ ಪರಾರಿಯಾಗಿದ್ದರು. ನಂತರ 2019ರಲ್ಲಿ ಅವರನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲಾಯಿತು.
ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಐಪಿಎಲ್ ಪ್ರಸಾರ ಹಕ್ಕುಗಳನ್ನು ನೀಡುವ ಸಂದರ್ಭದಲ್ಲಿ 125 ಕೋಟಿ ರೂಪಾಯಿಗೂ ಹೆಚ್ಚು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸಿದ್ದರು. ಈ ಕುರಿತು ತನಿಖೆ ನಡೆಯುತ್ತಿದ್ದ ವೇಳೆ, ಅವರು ಕೂಡ 2010ರಲ್ಲಿ ಭಾರತ ತೊರೆದು ಪರಾರಿಯಾಗಿದ್ದರು. ಪ್ರಸ್ತುತ ವಿಜಯ್ ಮಲ್ಯಾ ಹಾಗೂ ಲಲಿತ್ ಮೋದಿ ಇಬ್ಬರೂ ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ವಾಸಿಸುತ್ತಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ.
ಈ ನಡುವೆ, ಲಲಿತ್ ಮೋದಿ ಇತ್ತೀಚೆಗೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಜಯ್ ಮಲ್ಯಾದ ಜನ್ಮದಿನ ಆಚರಣೆಯ ಸಂದರ್ಭದ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ, ಇಬ್ಬರೂ ಕೇಂದ್ರ ಸರ್ಕಾರ ಹಾಗೂ ಭಾರತೀಯ ಕಾನೂನನ್ನು ಸಾರ್ವಜನಿಕವಾಗಿ ವ್ಯಂಗ್ಯ ಮಾಡುವ ದೃಶ್ಯಗಳು ಕಾಣಿಸಿಕೊಂಡಿತ್ತು.
ವಿಡಿಯೋದಲ್ಲಿ, “ನಾವು ಇಬ್ಬರೂ ಪರಾರಿಯಾಗಿರುವವರು. ಭಾರತದಿಂದ ದೊಡ್ಡದಾಗಿ ಪರಾರಿಯಾದವರು. ಮತ್ತೆ ಇಂಟರ್ನೆಟ್ ಅನ್ನು ಬೆಚ್ಚಿಬೀಳಿಸುವೆ. ಇದೋ ನಿಮಗಾಗಿ ಒಂದು. ಇದನ್ನು ನೋಡಿ ಅಸೂಯೆಯಿಂದ ಹೊಟ್ಟೆ ಉರಿಯಲಿ” ಎಂದು ಅವರು ಹೇಳುತ್ತಿರುವುದು ಗಮನ ಸೆಳೆದಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತದಲ್ಲಿ ಕಾನೂನಿನಡಿ ಹುಡುಕಲಾಗುತ್ತಿರುವ ಅಪರಾಧಿಗಳು ಹಾಗೂ ಪರಾರಿಯಾಗಿರುವವರನ್ನು ಮರಳಿ ಕರೆತರುವುದಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಹಲವು ದೇಶಗಳೊಂದಿಗೆ ನಿರಂತರವಾಗಿ ಚರ್ಚೆ ನಡೆಸಲಾಗುತ್ತಿದೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರಕರಣಗಳಲ್ಲಿ ಅನೇಕ ಕಾನೂನು ಹಂತಗಳ ಸಂಕೀರ್ಣತೆಗಳಿದ್ದರೂ, ಅವರು ಭಾರತದಲ್ಲಿನ ನ್ಯಾಯಾಲಯಗಳಲ್ಲಿ ವಿಚಾರಣೆಯನ್ನು ಎದುರಿಸುವಂತೆ ಮಾಡುವುದಕ್ಕಾಗಿ ಅವರನ್ನು ದೇಶಕ್ಕೆ ಮರಳಿ ಕರೆತರುವ ಸಂಕಲ್ಪ ನಮ್ಮದು” ಎಂದು ಹೇಳಿದ್ದಾರೆ.














