ದೇಶಾದ್ಯಂತ ಕ್ರಿಸ್ಮಸ್ ಆಚರಣೆಗಳು ಭರದಿಂದ ನಡೆಯುತ್ತಿದ್ದಾಗ, ಕೆಲವು ಸ್ಥಳಗಳಲ್ಲಿ ಗಲಭೆಕೋರರು ಶಾಂತಿಯನ್ನು ಕದಡಿದರು. ಕ್ರಿಸ್ಮಸ್ ಆಚರಿಸುವ ಕ್ರೈಸ್ತರ ಹಕ್ಕುಗಳನ್ನು ಉಲ್ಲಂಘಿಸಿದ್ದೂ ಅಲ್ಲದೇ ಧಾರ್ಮಿಕ ಸಾಮರಸ್ಯವನ್ನು ಭಂಗಗೊಳಿಸುವ ಚಟುವಟಿಕೆಗಳಲ್ಲಿಯೂ ಅವರು ತೊಡಗಿದರು.
ದೆಹಲಿಯ ಲಜಪತ್ ನಗರದಲ್ಲಿ ತಮ್ಮ ಮಕ್ಕಳೊಂದಿಗೆ ಕ್ರಿಸ್ಮಸ್ ಕ್ಯಾರೋಲ್ಗಳನ್ನು ಹಾಡುತ್ತಿದ್ದಾಗ ಬಜರಂಗದಳ ಸದಸ್ಯರು ದಾರಿಯನ್ನು ತಡೆದು ಬೆದರಿಕೆ ಹಾಕಿದ್ದಾರೆ ಎಂದು ಅಲ್ಲಿನ ಮಹಿಳೆಯರು ಆರೋಪಿಸಿದ್ದಾರೆ. ಒಡಿಶಾದ ಬೀದಿಗಳಲ್ಲಿ ಸಾಂಟಾ ಟೋಪಿಗಳನ್ನು ಮಾರಾಟ ಮಾಡುವ ಮಾರಾಟಗಾರರಿಗೆ ವ್ಯಕ್ತಿಯೊಬ್ಬ “ಇದು ಹಿಂದೂ ರಾಷ್ಟ್ರ, ಕ್ರಿಶ್ಚಿಯನ್ನರಿಗೆ ಪ್ರವೇಶವಿಲ್ಲ” ಎಂದು ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಬಿಜೆಪಿ ನಾಯಕಿ ಅಂಜು ಭಾರ್ಗವ ಅವರು ದೃಷ್ಟಿಹೀನ ಕ್ರಿಶ್ಚಿಯನ್ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಆಕೆಯ ಕುರುಡುತನವನ್ನು ಧರ್ಮಕ್ಕೆ ತಳುಕು ಹಾಕುವ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ವಿವಾದ ಭುಗಿಲೆದ್ದಿದೆ. ಹಿಂದೂ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಉತ್ತರಾಖಂಡದ ಹರಿದ್ವಾರದ ಗಂಗಾ ನದಿಯ ದಡದಲ್ಲಿರುವ ಸರ್ಕಾರಿ ಹೋಟೆಲ್ನಲ್ಲಿ ಯೋಜಿಸಲಾಗಿದ್ದ ಕ್ರಿಸ್ಮಸ್ ಆಚರಣೆಯನ್ನು ರದ್ದುಗೊಳಿಸಲಾಯಿತು.
ಕೇರಳದ ಪಾಲಕ್ಕಾಡ್ನಲ್ಲಿ ಕ್ರಿಸ್ಮಸ್ ಕ್ಯಾರೋಲ್ಗಳನ್ನು ಹಾಡುತ್ತಿದ್ದ ಮಕ್ಕಳ ಮೇಲೆ ಆರ್ಎಸ್ಎಸ್ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದ್ದಾನೆ. ಮಕ್ಕಳು ಮದ್ಯ ಸೇವಿಸಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಇದನ್ನು ಸಮರ್ಥಿಸಿಕೊಂಡಿದ್ದನ್ನು ಪೋಷಕರು ಖಂಡಿಸಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಜಾತ್ಯತೀತತೆಗೆ ಎದುರಾಗಿರುವ ಈ ಸವಾಲುಗಳನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ; ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.














