• ಡಿ.ಸಿ.ಪ್ರಕಾಶ್
“ಗಾಂಧಿ ಬಯಸಿದ್ದು ರಾಮರಾಜ್ಯವೇ. ನಾವು ಅವರಿಗೆ ಇಷ್ಟವಾದ ರಾಮನ ಹೆಸರನ್ನೇ ಇಟ್ಟಿದ್ದೇವೆ” ಎಂದು ಕೇಂದ್ರ ಸಚಿವರೊಬ್ಬರು ಸಂಸತ್ತಿನಲ್ಲಿ ಹೇಳಿದ್ದಾರೆ. ಆದರೆ ಅವರಿಗೆ ಗಾಂಧಿಯ ವಿಚಾರಗಳೂ ಗೊತ್ತಿಲ್ಲ, ಅವರು ಹೇಳುವ ರಾಮರಾಜ್ಯದ ಅರ್ಥವೂ ತಿಳಿದಿಲ್ಲ.
‘ಮಹಾತ್ಮ ಗಾಂಧಿ 100 ದಿನಗಳ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ‘ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ (ವಿಬಿ–ಜಿ ರಾಮ್ ಜಿ)’ ಎಂದು ಬದಲಾಯಿಸಿದ್ದಾರೆ. ಗಾಂಧಿಯವರ ಹೆಸರನ್ನು ನೋಡಿ ಅವರಿಗೆ ಕಿರಿಕಿರಿಯಾಗಿದೆ. ಅದಕ್ಕಾಗಿಯೇ ಆ ಹೆಸರನ್ನು ತೆಗೆದುಹಾಕಿದ್ದಾರೆ. ಇದಕ್ಕೆ ಅವರು ನೀಡುವ ಕಾರಣಗಳೇ ಅವರ ಅಜ್ಞಾನವನ್ನು ತೋರಿಸುತ್ತದೆ.
ಗಾಂಧೀಜಿ ಹೇಳಿದ ರಾಮರಾಜ್ಯವೇ ಬೇರೆ. ಇಂದು ಬಿಜೆಪಿ ನಡೆಸುತ್ತಿರುವ ಚಿತ್ರಹಿಂಸೆ ರಾಜ್ಯವೇ ಬೇರೆ.
ಗಾಂಧಿ ಹೇಳಿದ ಮಾತುಗಳು ಸ್ಪಷ್ಟವಾಗಿವೆ:
“ಭಾರತದಲ್ಲಿ ಹಿಂದೂಗಳ ಹೊರತು ಬೇರೆ ಯಾರೂ ವಾಸಿಸಬಾರದು ಎಂದು ಹಿಂದೂಗಳು ಭಾವಿಸಿದರೆ, ಅವರು ತಮ್ಮ ಸ್ವಂತ ಧರ್ಮವನ್ನು ನಾಶಪಡಿಸಿದಂತೆ”.
“ಅಸ್ಪೃಶ್ಯತೆ ಎಂಬ ವಿಷ ಈ ಧರ್ಮದೊಳಗೆ ಪ್ರವೇಶಿಸಿದ ಕ್ಷಣದಿಂದಲೇ ಅದರ ಪತನ ಆರಂಭವಾಯಿತು”.
“ಪ್ರತಿಯೊಬ್ಬರೂ ತಮ್ಮ ಧರ್ಮದ ಸತ್ಯವನ್ನು ಅರಿತುಕೊಂಡು, ನಕಲಿ ದೇವಮಾನವರ ಉಪದೇಶಗಳಿಗೆ ಕಿವಿಗೊಡದಿದ್ದರೆ ಸಂಘರ್ಷಗಳಿಗೆ ಜಾಗವೇ ಇರದು”.
“ಹಿಂದೂ–ಮುಸ್ಲಿಂ ಏಕತೆ ಮತ್ತು ಸತ್ಯಾಗ್ರಹ ಈ ಎರಡಕ್ಕೂ ನನ್ನ ಜೀವನವನ್ನು ಸಮರ್ಪಿಸಿದ್ದೇನೆ”.
“ಒಬ್ಬ ವ್ಯಕ್ತಿಯ ತಪ್ಪನ್ನು ಸಂಪೂರ್ಣವಾಗಿ ಸಮುದಾಯದ ಮೇಲೆ ಹೊರೆ ಹಾಕಬಾರದು”.
“ಶೂದ್ರರಿಗೆ ವೇದ ಅಧ್ಯಯನ ನಿಷೇಧಿಸುವುದನ್ನು ನಾನು ಒಪ್ಪಲಾರೆ. ನಾವು ವಿದೇಶಿ ಆಳ್ವಿಕೆಯಲ್ಲಿ ಇರುವವರೆಗೆ ನಾವೆಲ್ಲರೂ ಶೂದ್ರರೇ”.
“ಇಂದಿನ ಜಾತಿ ವ್ಯವಸ್ಥೆ ವರ್ಣಾಶ್ರಮ ಧರ್ಮಕ್ಕೆ ವಿರೋಧವಾಗಿದೆ”.
“ನಾನು ಕೊಲ್ಲಲ್ಪಟ್ಟರೂ ‘ರಾಮ’ ಮತ್ತು ‘ರಹೀಂ’ ಎಂಬ ಹೆಸರುಗಳನ್ನು ಉಚ್ಚರಿಸುವುದನ್ನು ನಿಲ್ಲಿಸುವುದಿಲ್ಲ. ಎರಡೂ ಒಂದೇ ದೇವರ ಹೆಸರುಗಳು”.
“ಹಿಂದುಸ್ತಾನ್ ಹಿಂದೂಗಳಿಗೆ, ಪಾಕಿಸ್ತಾನ ಮುಸ್ಲಿಮರಿಗೆ ಮಾತ್ರ ಎನ್ನುವುದಾದರೆ ಎರಡೂ ದೇಶಗಳು ವಿಷಭರಿತವಾಗುತ್ತವೆ”.
“ರಾಜಕಾರಣದಲ್ಲಿ ಧರ್ಮವನ್ನು ಬೆರೆಸಿದ ಪಾಪ ಮಾಡಿರುವುದು ನಾನೇ; ಅದರ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ”.
ಇವೆಲ್ಲವನ್ನೂ ಹೇಳಿದವರು ಮಹಾತ್ಮ ಗಾಂಧಿ. ಇವರ ಮಾತುಗಳಲ್ಲಿ ಒಂದನ್ನಾದರೂ ಬಿಜೆಪಿ ಒಪ್ಪಿಕೊಳ್ಳುವುದೇ?
“ಭಾರತದಲ್ಲಿ ಹಿಂದೂಗಳ ಹೊರತು ಬೇರೆ ಯಾರಿಗೂ ಸ್ಥಾನವಿಲ್ಲ ಎಂದು ಹಿಂದೂಗಳು ನಂಬಿದರೆ, ವಿಶೇಷವಾಗಿ ಮುಸ್ಲಿಮರು ಇಲ್ಲಿ ಬದುಕಬೇಕೆಂದರೆ ಹಿಂದೂಗಳ ದಾಸರಾಗಿಯೇ ಬದುಕಬೇಕು ಎಂದು ಭಾವಿಸಿದರೆ, ಅದು ಹಿಂದೂ ಧರ್ಮದ ಆತ್ಮಹತ್ಯೆಯೇ” ಎಂದು ಗಾಂಧಿ ಎಚ್ಚರಿಸಿದ್ದರು.
ಅದೇ ರೀತಿ, “ಪಾಕಿಸ್ತಾನದಲ್ಲಿ ಮುಸ್ಲಿಮರಿಗೆ ಮಾತ್ರ ಕಾನೂನುಬದ್ಧ ಹಕ್ಕುಗಳಿವೆ ಎಂದು ಪಾಕಿಸ್ತಾನ ನಂಬಿದರೆ, ಮತ್ತು ಮುಸ್ಲಿಮೇತರರು ತಮ್ಮ ಕೀಳು ಮತ್ತು ಗುಲಾಮರಾಗಿ ಬದುಕಬಹುದು ಎಂದು ನಂಬಿದರೆ, ಅದು ಭಾರತದಲ್ಲಿ ಇಸ್ಲಾಂ ಧರ್ಮಕ್ಕೆ ಮರಣಘಂಟೆ ಮೊಳಗಿಸಿದಂತಾಗುತ್ತದೆ” ಎಂದೂ ಅವರು ಹೇಳಿದರು.

ಈ ಮಾತುಗಳನ್ನು ಬಿಜೆಪಿಯ ಧಾರ್ಮಿಕ ರಾಜಕಾರಣ ಒಪ್ಪಿಕೊಳ್ಳುತ್ತದೆಯೇ?
“ನಾನು ಹೇಳುವ ರಾಮರಾಜ್ಯ ಎಂದರೆ ಹಿಂದೂ ರಾಜ್ಯವಲ್ಲ. ಅದು ದೈವಿಕ ರಾಜ್ಯ–ದೇವರ ರಾಜ್ಯ. ನನಗೆ ರಾಮ ಮತ್ತು ರಹೀಂ ಒಂದೇ ದೇವರು. ಸತ್ಯ ಮತ್ತು ನ್ಯಾಯವನ್ನು ಪ್ರತಿನಿಧಿಸುವ ದೇವರ ಹೊರತು ಬೇರೆ ದೇವರನ್ನು ನಾನು ಒಪ್ಪುವುದಿಲ್ಲ” ಎಂದು ಗಾಂಧಿ ಹೇಳಿದ್ದರು.
“ನನ್ನ ಕಲ್ಪನೆಯಲ್ಲಿ ರಾಮ ಈ ಭೂಮಿಯ ಮೇಲೆ ವಾಸಿಸಿದ್ದನೋ ಇಲ್ಲವೋ, ಆದರೆ ರಾಮರಾಜ್ಯದ ಪ್ರಾಚೀನ ಆದರ್ಶವು ನಿಸ್ಸಂದೇಹವಾಗಿ ನಿಜವಾದ ಪ್ರಜಾಪ್ರಭುತ್ವದ ಆದರ್ಶವಾಗಿದೆ. ಅದರಲ್ಲಿ ಅತ್ಯಂತ ಕೆಳಮಟ್ಟದ ನಾಗರಿಕನಿಗೂ ಸಹ ಸಂಕೀರ್ಣ ಮತ್ತು ದುಬಾರಿ ಕಾರ್ಯವಿಧಾನಗಳಿಲ್ಲದೆ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಬಹುದು” ಎಂದು ಗಾಂಧಿ ಹೇಳಿದ್ದರು.
“ಕೆಲವೇ ಕೆಲವರು ಮಾತ್ರವೇ ಸಂಪತ್ತಿನಲ್ಲಿ ಮುಳುಗಿದ್ದು, ಜನರು ಸಾಕಷ್ಟು ತಿನ್ನಲು ಸಾಧ್ಯವಾಗದ ಪ್ರಸ್ತುತ ಅಸಮಾನತೆಯ ಸ್ಥಿತಿಯಲ್ಲಿ ರಾಮರಾಜ್ಯ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಆದರೆ ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಭಾರತದ ಸ್ಥಿತಿ ಏನು?
ಬಿಜೆಪಿ ಸರ್ಕಾರದ ತಪ್ಪು ಕ್ರಮಗಳಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಜನರ ಬಡತನ ಹೆಚ್ಚಾಗಿದೆ. ನಿರುದ್ಯೋಗ ಹೆಚ್ಚಾಗಿದೆ. ಎಲ್ಲಾ ವಸ್ತುಗಳ ಬೆಲೆಗಳು ಹೆಚ್ಚಾಗಿದೆ. ಮೋದಿ ಸರ್ಕಾರದ ಆರ್ಥಿಕ ಚಟುವಟಿಕೆಗಳು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮತ್ತು ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿವೆ. ಎಲ್ಲಾ ಹಂತಗಳಲ್ಲಿಯೂ ಅಸಮಾನತೆ ಹೆಚ್ಚಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು, ರೈತರನ್ನು ಬಿಜೆಪಿ ಸರ್ಕಾರ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅವರಿಗೆ ಯಾವುದೇ ವಿಶೇಷ ಯೋಜನೆಗಳಿಲ್ಲ. ಅವರು ಶಿಕ್ಷಣವನ್ನು ಪ್ರಗತಿಯಿಂದ ಹಿಂದುಗ್ಗಿಸುವ ಯತ್ನವನ್ನು ನಡೆಸುತ್ತಿದ್ದಾರೆ.
ತೆರಿಗೆ ವಿಧಿಸುವುದು. ತೆರಿಗೆಯ ಮೇಲೆ ಮತ್ತೇ ತೆರಿಗೆ ವಿಧಿಸಿ ಚಿತ್ರಹಿಂಸೆ ನೀಡುವುದು ಬಿಜೆಪಿ ಸರ್ಕಾರದ ಏಕೈಕ ಕ್ರಮವಾಗಿದೆ. ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ಗೌರವಿಸುತ್ತಿಲ್ಲ. ಅವರು ರಾಜ್ಯಗಳನ್ನು ಶೌಚಾಲಯಗಳಿಗಿಂತ ಕೆಟ್ಟದಾಗಿ ಭಾವಿಸುತ್ತಾರೆ. ವೈವಿಧ್ಯಮಯ ಜನಾಂಗಗಳು, ಭಾಷೆಗಳು ಮತ್ತು ಸಂಸ್ಕೃತಿಗಳ ಜನರು ವಾಸಿಸುವ ದೇಶದ ಕಲ್ಪನೆಯನ್ನು ಅವರು ಮರೆತು ಅದನ್ನು ಒಂದೇ ದೇಶವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಭಾಷೆ, ಸಂಸ್ಕೃತಿ, ಜಾತಿ, ಧರ್ಮ–ವೈವಿಧ್ಯತೆಯ ಭಾರತವನ್ನು ಒಗ್ಗಟ್ಟಿನ ದೇಶವೆಂದು ಒಪ್ಪಿಕೊಳ್ಳುವ ಬದಲು, ಏಕರೂಪತೆಯತ್ತ ತಳ್ಳುವ ಪ್ರಯತ್ನ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಸಮಾಜದಲ್ಲಿ ಸಾಮಾನ್ಯ ನಾಗರಿಕರನ್ನು ಶತ್ರುಗಳನ್ನಾಗಿ ಮಾಡಲಾಗುತ್ತಿದೆ.
ಧರ್ಮವನ್ನು ಹೊರತುಪಡಿಸಿ ಎಲ್ಲವನ್ನೂ ಕಾಲಿನ ಕೆಳಗೆ ತುಳಿದು ಹಾಕಲಾಗುತ್ತದೆ. ಬಿಜೆಪಿಯ ಶೈಲಿಯು ತನ್ನ ಅಸಹಿಷ್ಣುತೆಯನ್ನು ನಿಂದೆಯಾಗಿ ವ್ಯಕ್ತಪಡಿಸುವುದು ಮತ್ತು ಸಮಾಜದಲ್ಲಿ ಸಹ ಮನುಷ್ಯರನ್ನು ಶತ್ರುಗಳನ್ನಾಗಿ ಮಾಡಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುವುದು. ಅವರು ತಮ್ಮ ಸ್ವಂತ ಧರ್ಮಕ್ಕೆ ಒಳ್ಳೆಯದನ್ನು ಮಾಡುತ್ತಿದ್ದಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ಬಿಜೆಪಿ ಸರ್ಕಾರದ ಏಕೈಕ ನೀತಿಯೆಂದರೆ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವುದು ಮತ್ತು ಸರ್ಕಾರಿ ಬಂಡವಾಳವನ್ನು ಕೆಲವು ಕಾರ್ಪೊರೇಟ್ ಕಂಪನಿಗಳಿಗೆ ತಿರುಗಿಸುವುದು.
“ನನ್ನ ಹಿಂದೂ ಧರ್ಮವು ಎಲ್ಲ ಧರ್ಮಗಳನ್ನು ಗೌರವಿಸಲು ಕಲಿಸುತ್ತದೆ. ಇದುವೇ ರಾಮರಾಜ್ಯದ ರಹಸ್ಯ” ಎಂದು ಗಾಂಧಿ ಹೇಳಿದ್ದಾರೆ. ದೇಶದ ಹಿತದ ಮಾತು ಬೇಡ. ಕನಿಷ್ಠ ಇನ್ನೊಬ್ಬನನ್ನು ಗೌರವಿಸುವಷ್ಟು ಸಹಿಷ್ಣುತೆ ಬಿಜೆಪಿಗೆ ಇದೆಯೇ? ಅಷ್ಟಾದರೂ ಮಾನವೀಯತೆ ಉಳಿದಿದೆಯೇ?














