ಖಾಸಿಂ ಸಾಬ್ ಎ
ಇತ್ತೀಚಿಗೆ ನಡೆದ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹಾಗೂ ತಮಿಳುನಾಡು, ಕೇರಳ, ಪಕ್ಷಿಮ ಬಂಗಾಳ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಸೋಲಿನ ಹಿನ್ನೆಲೆಯಲ್ಲಿ ಒಂದು ರಾಜಕೀಯ ವಿಶ್ಲೇಷಣೆ.
ಕಳೆದ ನಾಲ್ಕು ದಶಕಗಳ ಭಾರತೀಯ ಚುನಾವಣಾ ರಾಜಕೀಯವನ್ನು ಗಮನಿಸಿದರೆ ಒಂದು ಸ್ಪಷ್ಟ ಸತ್ಯ ಗೋಚರಿಸುತ್ತದೆ. ಭಾರತದ ಪ್ರಜಾಪ್ರಭುತ್ವವನ್ನು ಕೇವಲ ರಾಷ್ಟ್ರೀಯ ಪಕ್ಷಗಳು ನಿರ್ಧರಿಸುವುದಿಲ್ಲ. ಅದನ್ನು ರೂಪಿಸುವುದು ಪ್ರಾದೇಶಿಕ ಪಕ್ಷಗಳೇ. ಬಹುಪಕ್ಷೀಯ ವ್ಯವಸ್ಥೆಯು ಬಲವಾಗುತ್ತಿದ್ದಂತೆ, ಏಕಪಕ್ಷೀಯ ಪ್ರಾಬಲ್ಯದ ಯುಗವು ಹಲವು ದಶಕಗಳ ಹಿಂದೆಯೇ ಅಂತ್ಯಗೊಂಡಿದ್ದು, ಸಮ್ಮಿಶ್ರ ಸರ್ಕಾರಗಳ ರಾಜಕೀಯವೇ ದೇಶ ಹಾಗೂ ರಾಜ್ಯಗಳನ್ನು ಆಳುತ್ತಿವೆ ಎಂಬುದು ವರ್ತಮಾನದ ವಾಸ್ತವಿಕತೆಯಾಗಿದೆ.
ಸ್ವಾತಂತ್ರ್ಯದ ನಂತರ ಹಲವು ದಶಕಗಳವರೆಗೆ ಕಾಂಗ್ರೆಸ್ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಏಕೈಕ ಪ್ರಭುತ್ವ ಹೊಂದಿತ್ತು. ಆದರೆ 1967 ನಂತರ ಅದರ ಹಿಡಿತ ಸಡಿಲವಾಗುತ್ತಿದ್ದಂತೆ ರಾಜ್ಯಗಳ ಸಾಮಾಜಿಕ-ರಾಜಕೀಯ ಅಸಮಾಧಾನಗಳು ರಾಜಕೀಯ ರೂಪ ಪಡೆದುಕೊಂಡವು. ಭಾಷೆ, ಸಂಸ್ಕೃತಿ, ಪ್ರಾದೇಶಿಕ ಅಭಿವೃದ್ಧಿ, ಮೀಸಲಾತಿ ಮತ್ತು ಸ್ಥಳೀಯ ಸ್ವಾಯತ್ತತೆಗಳ ಪ್ರಶ್ನೆಗಳು ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾದವು. 1989 ರಿಂದ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದುದು ಇದೇ ಪರಿವರ್ತನೆಯ ಪರಿಣಾಮ.
ಇಂದು ಭಾರತೀಯ ಚುನಾವಣಾ ಆಯೋಗದಲ್ಲಿ ಸಾವಿರಾರು ಪಕ್ಷಗಳು ನೋಂದಾಯಿತವಾಗಿದ್ದರೂ, ರಾಷ್ಟ್ರೀಯ ರಾಜಕೀಯದ ಸಮೀಕರಣವನ್ನು ನಿರ್ಧರಿಸುವುದು ಕೆಲವೇ ಪ್ರಭಾವಿ ಪ್ರಾದೇಶಿಕ ಪಕ್ಷಗಳು. ಕಳೆದ ಮೂರು ದಶಕಗಳಲ್ಲಿ ಎನ್ಡಿಎ, ಯುಪಿಎ ಮತ್ತು ಲೆಫ್ಟ್ ಫ್ರಂಟ್ ನಂತಹ ಒಕ್ಕೂಟಗಳ ಅಸ್ತಿತ್ವವೇ ಪ್ರಾದೇಶಿಕ ಪಕ್ಷಗಳ ಅವಲಂಬನೆಯ ಸಾಕ್ಷಿ. ಪ್ರಾರಂಭದ ಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರತಿನಿಧಿತ್ವದ ರಾಜಕೀಯವನ್ನು ಬಲಪಡಿಸಿದವು. ಕೇಂದ್ರದ ನಿರ್ಲಕ್ಷ್ಯಕ್ಕೆ ಪ್ರತಿಕ್ರಿಯೆಯಾಗಿ ಅವು ಹುಟ್ಟಿಕೊಂಡವು. ಆದರೆ ಕಾಲಕ್ರಮೇಣ ಬಹುತೇಕ ಪಕ್ಷಗಳು ವ್ಯಕ್ತಿ, ಕುಟುಂಬ ಮತ್ತು ಜಾತಿ ಕೇಂದ್ರೀಕೃತ ರಾಜಕೀಯದತ್ತ ಸರಿದವು.
ಪಂಜಾಬಿನ ಅಕಾಲಿ ದಳದಿಂದ ಹಿಡಿದು ತಮಿಳುನಾಡಿನ ಡಿಎಂಕೆ-ಎಐಎಡಿಎಂಕೆ, ಉತ್ತರ ಭಾರತದ ಜಾತಿ ಆಧಾರಿತ ಪಕ್ಷಗಳು, ಆಂಧ್ರ-ತೆಲಂಗಾಣದ ಕುಟುಂಬಾಧಾರಿತ ಪಕ್ಷಗಳು, ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಅಧಿಕಾರ ಒಬ್ಬ ನಾಯಕ ಅಥವಾ ಅವರ ಕುಟುಂಬದ ಸುತ್ತ ಕೇಂದ್ರೀಕೃತವಾಗಿರುತ್ತದೆ. ಪಕ್ಷದ ಒಳಗಿನ ಪ್ರಜಾಪ್ರಭುತ್ವ ಕ್ಷೀಣವಾಗಿದ್ದು, ಉತ್ತರಾಧಿಕಾರವೂ ಕುಟುಂಬದೊಳಗೆ ನಿರ್ಧಾರಗೊಳ್ಳುತ್ತದೆ. ಹೀಗಾಗಿ, ಪ್ರಾದೇಶಿಕ ಪಕ್ಷಗಳು ಅನೇಕ ಸಂದರ್ಭಗಳಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆಗಳಿಗಿಂತ “ಆಧುನಿಕ ರಾಜಕೀಯ ಸಾಮ್ರಾಜ್ಯಗಳ” ರೂಪ ಪಡೆದುಕೊಳ್ಳುತ್ತವೆ. ನಿರ್ದಿಷ್ಟ ಜಾತಿಗಳ ರಾಜಕೀಯ ಪ್ರತಿನಿಧಿಗಳಾಗಿ ಅವು ಕಾರ್ಯನಿರ್ವಹಿಸುತ್ತವೆ.
ಭಾರತದ ಬಹುತೇಕ ಪ್ರಾದೇಶಿಕ ಪಕ್ಷಗಳ ಹುಟ್ಟು ಮೇಲ್ವರ್ಗ ಅಥವಾ ಪ್ರಭಲ ಭೂಮಾಲೀಕ ಜಾತಿಗಳ (BSP, LJP, RPI, DPI) ಇಂತಹ ಕೆಲ ಪಕ್ಷಗಳನ್ನು ಹೊರತುಪಡಿಸಿ) ರಾಜಕೀಯ ಪ್ರಾಭಲ್ಯಕ್ಕೆ ಸಂಬಂಧಿಸಿದವೆಯೇ ಆಗಿವೆ. ಜಾತಿ ಆಧಾರಿತ ಮತ ಬ್ಯಾಂಕ್ಗಳು ಈ ಪಕ್ಷಗಳ ಪ್ರಮುಖ ಆಧಾರವಾಗಿವೆ. ಇದರಿಂದ ಪ್ರಾದೇಶಿಕ ರಾಜಕೀಯವು ಸಾಮಾಜಿಕ ನ್ಯಾಯದ ಕಲ್ಪನೆ ಬಳಸಿದರೂ ಇವು ಮೂಲತಹ ಆ ಜಾತಿ ಅಥವಾ ಕುಟುಂಬ ರಾಜಕಾರಣಕ್ಕೆ ಸೀಮಿತಗೊಂಡಿರುತ್ತವೆ. ಹಲವಾರು ಬಾರಿ ಈ ಪ್ರಾದೇಶಿಕ ಪಕ್ಷಗಳು ಹೊಸ ಅಧಿಕಾರಯುತ ವರ್ಗಗಳನ್ನು ನಿರ್ಮಿಸಿವೆ. ದಲಿತ, ಸಮಾಜವಾದಿ ಅಥವಾ ಅಲ್ಪಸಂಖ್ಯಾತರ ರಾಜಕೀಯವನ್ನು ಪ್ರತಿನಿಧಿಸುವ ಪಕ್ಷಗಳಲ್ಲಿಯೂ ವ್ಯಕ್ತಿಪೂಜೆ ಮತ್ತು ಕುಟುಂಬಾಧಿಪತ್ಯದ ಪ್ರವೃತ್ತಿ ಕಾಣಿಸಿಕೊಳ್ಳುವುದು ಈ ವೈಪರೀತ್ಯವನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತೊಂದು ಮಹತ್ವದ ಪ್ರಶ್ನೆಯನ್ನು ಎತ್ತಿವೆ. ರಾಷ್ಟ್ರೀಯ ಪಕ್ಷಗಳೊಂದಿಗೆ ದೀರ್ಘಕಾಲ ಮೈತ್ರಿ ಮಾಡಿಕೊಂಡ ಪ್ರಾದೇಶಿಕ ಪಕ್ಷಗಳು ನಿಧಾನವಾಗಿ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಗೋಚರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್ಸಿಪಿ ಬಣಗಳ ದುರ್ಬಲತೆ, ಪಂಜಾಬ್ನಲ್ಲಿ ಅಕಾಲಿ ದಳದ ಕುಸಿತ, ಬಿಹಾರದಲ್ಲಿ ಜೆಡಿಯು ಹಿನ್ನಡೆ, ಒಡಿಶಾದಲ್ಲಿ ಬಿಜೆಡಿಯ ಸವಾಲು ಇವೆಲ್ಲವೂ ಒಂದೇ ರಾಜಕೀಯ ಪಾಠವನ್ನು ಸೂಚಿಸುತ್ತಿವೆ. ದೊಡ್ಡ ರಾಷ್ಟ್ರೀಯ ಪಕ್ಷದ ನೆರಳಿನಲ್ಲಿ ಉಳಿಯುವ ಪ್ರಾದೇಶಿಕ ಪಕ್ಷಗಳು ಕ್ರಮೇಣ ಅದರೊಳಗೆ ಲೀನವಾಗುವ ಅಪಾಯವಿದೆ ಎಂಬ ಅನುಭವ. ಕರ್ನಾಟಕದಲ್ಲಿಯೂ ಜೆಡಿಎಸ್ ಎದುರಿಸುತ್ತಿರುವ ಸಂಕಟ ಇದೇ ಪ್ರಕ್ರಿಯೆಯ ಭಾಗವಾಗಿದೆ. ಮೈತ್ರಿ ರಾಜಕಾರಣ ಅಸ್ತಿತ್ವ ಉಳಿಸುವ ಸಾಧನವೇ ಅಥವಾ ಅಂತ್ಯದ ಆರಂಭವೇ ಎಂಬ ಪ್ರಶ್ನೆ ಈಗ ಪ್ರಾದೇಶಿಕ ಪಕ್ಷಗಳ ಮುಂದೆ ನಿಂತಿದೆ.
ಪ್ರಾದೇಶಿಕ ಪಕ್ಷಗಳ ಇಷ್ಟು ಸೀಮಿತತೆಗಳ ನಡುವೆಯೂ ಇವುಗಳ ರಾಜಕೀಯವನ್ನು ಸಂಪೂರ್ಣವಾಗಿ ನಿರಾಕರಿಸಲಾಗುವುದಿಲ್ಲ. ಭಾರತ ಏಕಸ್ವರೂಪ ರಾಷ್ಟ್ರವಲ್ಲ. ಅದು ಭಾಷಾ, ಸಂಸ್ಕೃತಿ, ಜಾತಿ ಮತ್ತು ಆರ್ಥಿಕ ವೈವಿಧ್ಯಗಳ ಒಕ್ಕೂಟ. ಈ ವೈವಿಧ್ಯಕ್ಕೆ ರಾಜಕೀಯ ಅಭಿವ್ಯಕ್ತಿ ನೀಡುವುದು ಪ್ರಾದೇಶಿಕ ಪಕ್ಷಗಳ ಪ್ರಮುಖ ಪಾತ್ರವಾಗಿದೆ. ಅವು ಕೇಂದ್ರದ ಏಕಾಧಿಪತ್ಯವನ್ನು ಪ್ರಶ್ನಿಸಿ ಫೆಡರಲ್ ವ್ಯವಸ್ಥೆಯನ್ನು ಜೀವಂತವಾಗಿಟ್ಟಿವೆ. ಆದರೆ, ವ್ಯಕ್ತಿಪೂಜೆ, ಕುಟುಂಬರಾಜಕೀಯ ಮತ್ತು ಜಾತಿ ಪ್ರಾಬಲ್ಯದ ಚಕ್ರದಿಂದ ಹೊರಬರದಿದ್ದರೆ, ಇದೇ ಪಕ್ಷಗಳು ಪ್ರಜಾಪ್ರಭುತ್ವದ ಬಲವಾಗುವುದಕ್ಕಿಂತ ಅದರ ದುರ್ಬಲತೆಯ ಕಾರಣವಾಗಬಹುದು. ಪ್ರಾದೇಶಿಕ ಪಕ್ಷಗಳು ಭಾರತೀಯ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಅವು ಪ್ರತಿರೋಧದ ರಾಜಕೀಯವನ್ನು ಹುಟ್ಟಿಸಿದವು, ಆದರೆ ಇಂದು ಅವುಗಳೇ ಹೊಸ ಪ್ರಭುತ್ವಗಳ ಸಾಧನಗಳಾಗಿ ರೂಪಾಂತರಗೊಳ್ಳುತ್ತಿರುವ ಆತಂಕವೂ ಇದೆ. ಮುಂದಿನ ಭವಿಷ್ಯದ ಪ್ರಶ್ನೆ ಎಂದರೆ, ಪ್ರಾದೇಶಿಕ ಪಕ್ಷಗಳು ಜನರ ಪ್ರತಿನಿಧಿಗಳಾಗಿಯೇ ಉಳಿಯುತ್ತವೆಯಾ, ಅಥವಾ ಜಾತಿ, ಕುಟುಂಬಗಳ ರಾಜಕೀಯ ಸಂಸ್ಥೆಗಳಾಗಿಯೇ ಸೀಮಿತವಾಗುತ್ತವೆಯೆ ಎಂಬುದು.
ಭಾರತವು ಬಹುಭಾಷಾ, ಬಹುಧರ್ಮ, ಬಹುಸಂಸ್ಕೃತಿಗಳ ಮಹಾಸಾಗರ. ಈ ವೈವಿಧ್ಯತೆಯ ನಡುವೆ ರಾಷ್ಟ್ರದ ಏಕತೆಯನ್ನು ಕಾಪಾಡಿಕೊಂಡು ಸಾಗುವ ರಾಜಕೀಯ ವ್ಯವಸ್ಥೆಯು ಸಂವಿಧಾನಾತ್ಮಕ ಫೆಡರಲಿಸಂನ ಮೇಲೆ ನಿಂತಿದೆ. ಈ ವ್ಯವಸ್ಥೆಯ ಪ್ರಾಯೋಗಿಕ ರೂಪವೇ ಪ್ರಾದೇಶಿಕ ರಾಜಕೀಯ ಪಕ್ಷಗಳು. ಆದರೆ ಇವು ರಾಷ್ಟ್ರ ರಾಜಕೀಯಕ್ಕೆ ಅಗತ್ಯವೇ? ಅಥವಾ ಸೀಮಿತ ಪ್ರಭಾವ ಹೊಂದಿದ ಪ್ರಾಂತ್ಯಪರ ಅಜೆಂಡಾಗಳಲ್ಲಿ ಸಿಲುಕಿವೆಯೇ? ಎಂಬ ಪ್ರಶ್ನೆ ಸಮಕಾಲೀನ ರಾಜಕೀಯ ಚರ್ಚೆಯ ಕೇಂದ್ರವಾಗಿದೆ.
ಸ್ವಾತಂತ್ರ್ಯಾನಂತರ ಪ್ರಾರಂಭದ ಎರಡು ದಶಕಗಳಲ್ಲಿ ರಾಷ್ಟ್ರೀಯ ಪಕ್ಷಗಳೇ ರಾಜಕೀಯದ ಮೇಲೆ ಪ್ರಭುತ್ವ ಸಾಧಿಸಿದ್ದವು. ವಿಶೇಷವಾಗಿ Indian National Congress ಪಕ್ಷವು ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸಿತು. ಆದರೆ 1960ರ ದಶಕದಿಂದ ಪ್ರಾಂತ್ಯಗಳ ಭಾಷಾ, ಸಂಸ್ಕೃತಿ, ಆರ್ಥಿಕ ಹಿತಾಸಕ್ತಿಗಳ ಪ್ರಶ್ನೆಗಳು ಬಲವಾಗಿ ಮುಂದುವರಿದವು. ತಮಿಳುನಾಡಿನಲ್ಲಿ DMK ಪಕ್ಷವು ದ್ರಾವಿಡ ಚಳುವಳಿಯಿಂದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತು. ಆಂಧ್ರಪ್ರದೇಶದಲ್ಲಿ TDP ಪಕ್ಷವು ತೆಲುಗು ಸ್ವಾಭಿಮಾನವನ್ನು ಪ್ರತಿನಿಧಿಸಿತು. ಮಹಾರಾಷ್ಟ್ರದಲ್ಲಿ Shiv Sena, ಉತ್ತರ ಪ್ರದೇಶದಲ್ಲಿ Samajwadi Party ಮತ್ತು Bahujan Samaj Party, ಪಶ್ಚಿಮ ಬಂಗಾಳದಲ್ಲಿ All India Trinamool Congress ಮುಂತಾದ ಪಕ್ಷಗಳು ತಮ್ಮ ತಮ್ಮ ಪ್ರದೇಶದ ಧ್ವನಿಯನ್ನು ರಾಷ್ಟ್ರ ಮಟ್ಟಕ್ಕೆ ತಂದವು.
ಈ ನಡುವೆ ಪ್ರಾದೇಶಿಕ ಪಕ್ಷಗಳು ಹಲವಾರು ಸೀಮಿತತೆಗಳಿಂದ ಬಳಲುತ್ತಿವೆ. ಇವುಗಳ ಪ್ರಾಂತ್ಯಪರ ರಾಜಕೀಯವು ಕೆಲವು ಸಂದರ್ಭಗಳಲ್ಲಿ ರಾಷ್ಟ್ರ ಹಿತಾಸಕ್ತಿಗಿಂತ ಪ್ರಾಂತ್ಯದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುವ ಅಪಾಯವಿದೆ. ಅಲ್ಲದೆ ಇವುಗಳ ಕುಟುಂಬ ರಾಜಕೀಯವು ಕುಟುಂಬಾಧಿಪತ್ಯಕ್ಕೆ ಒಳಪಟ್ಟಿರುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ಎಸಗಿದ ಪ್ರಶ್ನೆಯಾಗಿದೆ. ಈ ಪ್ರಾದೇಶಿಕ ಪಕ್ಷಗಳ ಮೈತ್ರಿ ರಾಜಕೀಯವು ನಿರಂತರ ಅಸ್ಥಿರತೆಯಿಂದ ಕೂಡಿರುತ್ತದೆ. ಇದು, ಅಪರೂಪಕ್ಕೆ ಕೇಂದ್ರದಲ್ಲಿ ಮೈತ್ರಿ ಸರ್ಕಾರಗಳ ಸ್ಥಿರತೆಯನ್ನು ಕೆಲವೊಮ್ಮೆ ಪ್ರಾದೇಶಿಕ ಪಕ್ಷಗಳ ಒತ್ತಡ ರಾಜಕೀಯ ದುರ್ಬಲಗೊಳಿಸುತ್ತದೆ.
ಈ ಪ್ರಾದೇಶಿಕ ಪಕ್ಷಗಳ ಅತಿದೊಡ್ಡ ಸೀಮಿತತೆ ಇವುಗಳ ವ್ಯಾಪ್ತಿ, ಈ ಪಕ್ಷಗಳ ಪ್ರಭಾವ ಬಹುತೇಕ ಒಂದು ರಾಜ್ಯ ಅಥವಾ ಕೆಲವು ಜಿಲ್ಲೆಗಳವರೆಗೆ ಮಾತ್ರ ಸೀಮಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ಮತ್ತಷ್ಟು ಬಲವಾಗುತ್ತಿರುವುದು ಗೋಚರಿಸುತ್ತಿದೆ. ಆದರೂ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ ಮುಂತಾದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಇನ್ನೂ ಪ್ರಮುಖ ಶಕ್ತಿಗಳಾಗಿವೆ. ರಾಷ್ಟ್ರ ರಾಜಕೀಯದಲ್ಲಿಯೂ ಇವುಗಳು ‘ಕಿಂಗ್ ಮೇಕರ್’ ಪಾತ್ರ ವಹಿಸುವ ಸಾಧ್ಯತೆ ಸದಾ ಇರುತ್ತದೆ.
ಪ್ರಾದೇಶಿಕ ಪಕ್ಷಗಳು ಭಾರತೀಯ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಅವುಗಳ ಅಗತ್ಯತೆಯನ್ನು ನಿರಾಕರಿಸಲಾಗದು. ಆದರೆ ಅವುಗಳು ರಾಷ್ಟ್ರದ ಸಮಗ್ರ ಹಿತಾಸಕ್ತಿಯನ್ನೂ ಮನದಲ್ಲಿಟ್ಟುಕೊಂಡು ನಡೆದುಕೊಳ್ಳಬೇಕಾಗಿದೆ. ಪ್ರಾಂತ್ಯಪರ ಭಾವನೆ ಮತ್ತು ರಾಷ್ಟ್ರೀಯ ಏಕತೆ ನಡುವಿನ ಸಮತೋಲನವೇ ಆರೋಗ್ಯಕರ ರಾಜಕೀಯದ ಲಕ್ಷಣ. ಹೀಗಾಗಿ, ಪ್ರಾದೇಶಿಕ ಪಕ್ಷಗಳು ‘ಅಗತ್ಯವೂ ಹೌದು’, ‘ಸೀಮಿತವೂ ಹೌದು’. ಅವುಗಳ ಪಾತ್ರ ದೇಶದ ರಾಜಕೀಯ ಪರಿಪಕ್ವತೆಯ ಮೇಲೆ ಅವಲಂಬಿತವಾಗಿದೆ.














