ಡಿ.ಸಿ.ಪ್ರಕಾಶ್
ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಸಂಪೂರ್ಣವಾಗಿ ಓದದೆ, ತಾವು ತಂದ ಕೆಲವೇ ಸಾಲುಗಳನ್ನು ಓದಿ ಸಭೆಯಿಂದ ನಿರ್ಗಮಿಸಿರುವುದು ಸಂವಿಧಾನಾತ್ಮಕ ಶಿಸ್ತುಗೆ ಸವಾಲು ಎಸೆದಂತಾಗಿದೆ. ಇದು ಕೇವಲ ಪ್ರೋಟೋಕಾಲ್ ಉಲ್ಲಂಘನೆಯಲ್ಲ; ಜನರಿಂದ ಆಯ್ಕೆಯಾದ ಸರ್ಕಾರದ ಧ್ವನಿಯನ್ನು ವಿಧಾನಸಭೆಯೊಳಗೆ ಮೌನಗೊಳಿಸುವ ಅಪಾಯಕಾರಿ ಪ್ರಯತ್ನ.
ಭಾರತೀಯ ಸಂವಿಧಾನದ ವಿಧಿ 176 ಸ್ಪಷ್ಟವಾಗಿ ಹೇಳುತ್ತದೆ – ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಸಲಹೆಯ ಮೇರೆಗೆ ಸಿದ್ಧಗೊಂಡ ಭಾಷಣವನ್ನೇ ಓದಬೇಕು. ರಾಜ್ಯಪಾಲರದ್ದು ಕಾರ್ಯಾಂಗ ಅಧಿಕಾರ ಹೊಂದಿರುವ ಹುದ್ದೆಯಲ್ಲ; ಅವರು ಸಂವಿಧಾನಿಕ ಮುಖ್ಯಸ್ಥರು. ಆ ಮಿತಿಯನ್ನು ಮೀರುವುದು ಸಂವಿಧಾನದ ಅಕ್ಷರ ಮತ್ತು ಆತ್ಮಕ್ಕೆ ವಿರುದ್ಧವಾಗಿದೆ. ಚುನಾಯಿತ ಸರ್ಕಾರದ ಮೇಲೆ ನೇಮಕಗೊಂಡ ರಾಜ್ಯಪಾಲರ ಪ್ರಾಭಲ್ಯವು ಪ್ರಜಾಪ್ರಭುತ್ವದ ವಿಕೃತ ರೂಪಾವಾಗಿದೆ.
ತಮಿಳುನಾಡು, ಕೇರಳ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳ ಬಗ್ಗೆ ರಾಜ್ಯಪಾಲರ ಅತಿಸೂಕ್ಷ್ಮತೆಯನ್ನು ಪದೇ ಪದೇ ಗಮನಿಸಲಾಗಿದೆ. ಇದರಿಂದ ರಾಜ್ಯಪಾಲರು ಕೇಂದ್ರ ಸರ್ಕಾರದ “ಏಜೆಂಟ್”ಗಳಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಬಲ ಪಡೆಯುತ್ತಿವೆ. ಬಿಜೆಪಿ ಈ ನಡೆಗೆ ನೀಡುತ್ತಿರುವ ಸಮರ್ಥನೆಗಳು, ಕೇಂದ್ರದ ರಾಜಕೀಯ ಇಚ್ಛಾಶಕ್ತಿ ರಾಜ್ಯಪಾಲರ ಮೂಲಕ ಕಾರ್ಯಗತವಾಗುತ್ತಿದೆ ಎಂಬ ಅನುಮಾನವನ್ನು ಮತ್ತಷ್ಟು ಗಾಢಗೊಳಿಸುತ್ತಿವೆ.
ಇಂತಹ ಪ್ರವೃತ್ತಿಗಳು ಒಕ್ಕೂಟ ವ್ಯವಸ್ಥೆಯ ಮೂಲವನ್ನೇ ಕುಸಿತಗೊಳಿಸುತ್ತವೆ. ರಾಜ್ಯಗಳ ಸ್ವಾಯತ್ತತೆ ದುರ್ಬಲವಾದಂತೆ, ಅಧಿಕಾರ ಕೇಂದ್ರದತ್ತ ಮಾತ್ರ ಕೇಂದ್ರೀಕೃತವಾಗುತ್ತದೆ. ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಬದಿಗೊತ್ತಿ, ನೇಮವಾದ ರಾಜ್ಯಪಾಲರು ಆಡಳಿತದ ದಿಕ್ಕು ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾದರೆ, ಪ್ರಜಾಸತ್ತೆ ಕಾಗದದ ಮೇಲಿನ ಪದವಾಗುವ ಅಪಾಯವಿದೆ. ಇದೇ ಮುಂದುವರಿದರೆ, ದೇಶ ನಿಧಾನವಾಗಿ ಸರ್ವಾಧಿಕಾರದ ಹಾದಿಗೆ ಜಾರುತ್ತಿದೆ ಎಂಬ ಆತಂಕವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಈ ಸಂದರ್ಭದಲ್ಲಿ, ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣವನ್ನು ಮರುಪರಿಶೀಲಿಸಬೇಕು ಎಂಬ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪ್ರಸ್ತಾಪವು ಗಂಭೀರ ಚರ್ಚೆಗೆ ಆಹ್ವಾನ ನೀಡುತ್ತದೆ. ರಾಜ್ಯಪಾಲರ ಪಾತ್ರ, ಅಧಿಕಾರ ಮತ್ತು ಮಿತಿಗಳಿಗೆ ಸ್ಪಷ್ಟತೆ ನೀಡದೇ ಹೋದರೆ, ಈ ಹುದ್ದೆ ಆಡಳಿತಕ್ಕೆ ನೆರವಾಗುವ ಬದಲು ನಿರಂತರ ಸಂಘರ್ಷದ ಕೇಂದ್ರವಾಗುತ್ತದೆ.
ಡಿಎಂಕೆ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ದಿವಂಗತ ಸಿ.ಎನ್.ಅಣ್ಣಾದುರೈ ಅವರ “ಮೇಕೆಗೆ ಗಡ್ಡ – ರಾಜ್ಯಕ್ಕೆ ಗವರ್ನರ್ ಅಗತ್ಯವಿಲ್ಲ?” ಎಂಬ ಪ್ರಶ್ನೆ ಇಂದು ಮತ್ತೆ ಪ್ರತಿಧ್ವನಿಸುತ್ತಿದೆ. ರಾಜ್ಯಪಾಲರ ಹುದ್ದೆ ಸಂವಿಧಾನವನ್ನು ರಕ್ಷಿಸಲು ಇರಬೇಕೇ ಹೊರತು, ರಾಜಕೀಯ ಅಸ್ತ್ರವಾಗಬಾರದು. ಸಂವಿಧಾನಾತ್ಮಕ ಶಿಸ್ತು, ರಾಜಕೀಯ ತಟಸ್ಥತೆ ಮತ್ತು ಪ್ರಜಾಸತ್ತೆಯ ಗೌರವವನ್ನು ರಾಜ್ಯಪಾಲರ ಕಚೇರಿ ಪಾಲಿಸದಿದ್ದರೆ, ರಾಜ್ಯಗಳಿಗೂ ದೇಶಕ್ಕೂ ಇದರ ಬೆಲೆ ಭಾರೀ.
ಇಂದು ಸರ್ಕಾರದ ಭಾಷಣ ಕತ್ತರಿಸಿದರೆ, ನಾಳೆ ಸರ್ಕಾರಗಳನ್ನೇ ಕತ್ತರಿಸುವ ಸಂಪ್ರದಾಯ ಬೆಳೆದುಬಿಡದಂತೆ ಎಚ್ಚರಿಕೆಯಾಗಬೇಕಿದೆ. ಪ್ರಶ್ನೆ ಸ್ಪಷ್ಟವಾಗಿದೆ – ರಾಜ್ಯಗಳಲ್ಲಿ ಆಳುವವರು ಜನರಿಂದ ಆಯ್ಕೆಯಾದ ಸರ್ಕಾರಗಳೇ, ಅಥವಾ ನೇಮವಾದ ರಾಜ್ಯಪಾಲರೇ?
ಪರಿಹಾರವೇನು?
ರಾಜ್ಯಪಾಲರ ಪಾತ್ರ ಮತ್ತು ಅಧಿಕಾರಗಳಿಗೆ ಸ್ಪಷ್ಟ ಮಿತಿ
ಸಂವಿಧಾನದ ವಿಧಿ 176ರಲ್ಲಿ ತಿದ್ದುಪಡಿ ಕುರಿತು ಚರ್ಚೆ (ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪ್ರಸ್ತಾಪಿಸಿದಂತೆ)
ಸುಪ್ರೀಂ ಕೋರ್ಟ್ ಮಾರ್ಗದರ್ಶನ
ರಾಜ್ಯಪಾಲರ ನೇಮಕಾತಿಯಲ್ಲಿ ರಾಜಕೀಯ ತಟಸ್ಥತೆ














