ಬಿಹಾರ ಮತ್ತು ಉತ್ತರ ಪ್ರದೇಶದ ನಂತರ ದೇಶದಲ್ಲಿ ಅತ್ಯಧಿಕ ಜನದಟ್ಟಣೆಯ ಜೈಲುಗಳನ್ನು ಹೊಂದಿರುವ ರಾಜ್ಯವಾಗಿ ಮಧ್ಯಪ್ರದೇಶ ಗುರುತಿಸಿಕೊಂಡಿದೆ. ಜೈಲುಗಳಲ್ಲಿ ಇರುವ ವಿಚಾರಣಾಧೀನ ಕೈದಿಗಳಲ್ಲಿ ಶೇಕಡಾ 21 ರಷ್ಟು ಮಂದಿ ಬುಡಕಟ್ಟು ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ರಾಜ್ಯದ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, 2011ರ ಜನಗಣತಿಯ ಪ್ರಕಾರ ಮಧ್ಯಪ್ರದೇಶದಲ್ಲಿ 1.53 ಕೋಟಿ ಬುಡಕಟ್ಟು ಜನಸಂಖ್ಯೆ ಇದ್ದು, ಇದು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.21.08 ರಷ್ಟಾಗುತ್ತದೆ. ಭಾರತೀಯ ರಾಜ್ಯಗಳಲ್ಲಿ ಇದು ಅತಿ ಹೆಚ್ಚು ಬುಡಕಟ್ಟು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದ 132 ಜೈಲುಗಳಲ್ಲಿ ಒಟ್ಟು 45,543 ಕೈದಿಗಳು ಬಂಧಿತರಾಗಿದ್ದು, ಜೈಲುಗಳ ಒಟ್ಟು ಸಾಮರ್ಥ್ಯ ಕೇವಲ 30,000 ಮಾತ್ರವಾಗಿದೆ. ಈ ಮೂಲಕ ರಾಜ್ಯದ ಜೈಲುಗಳು ತೀವ್ರ ಜನದಟ್ಟಣೆಯಿಂದ ಬಳಲುತ್ತಿವೆ. ಒಟ್ಟು ಕೈದಿಗಳಲ್ಲಿ 22,946 ಮಂದಿ, ಅಂದರೆ ಶೇಕಡಾ 50 ರಷ್ಟು ವಿಚಾರಣಾಧೀನ ಬಂಧಿತರಾಗಿದ್ದಾರೆ.
ಈ ವಿಚಾರಣಾಧೀನ ಕೈದಿಗಳಲ್ಲಿ ಶೇಕಡಾ 21 ರಷ್ಟು ಮಂದಿ ಬುಡಕಟ್ಟು ಸಮುದಾಯಗಳಿಗೆ ಸೇರಿದವರಾಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಪ್ರಮಾಣವಾಗಿದೆ ಎಂದು ಉಮಾಂಗ್ ಸಿಂಘಾರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಚಾರಣಾಧೀನ ಕೈದಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಶಿಫಾರಸುಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತ್ವರಿತ ತನಿಖೆ, ಸರಳ ಜಾಮೀನು ಪ್ರಕ್ರಿಯೆ ಹಾಗೂ ಜೈಲುಗಳಲ್ಲಿ ಜಾತಿ ಆಧಾರಿತ ದತ್ತಾಂಶದ ಆಧಾರದ ಮೇಲೆ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಹಸ್ತಕ್ಷೇಪ ಮಾಡಬೇಕಾಗಿದೆ. ಬಡತನ ಮತ್ತು ಕಾನೂನು ನೆರವಿನ ಕೊರತೆಯಿಂದಾಗಿ ಅನೇಕ ಬುಡಕಟ್ಟು ಹಾಗೂ ದಲಿತರು ಶಿಕ್ಷೆ ವಿಧಿಸದೇ ದೀರ್ಘಕಾಲ ಜೈಲಿನಲ್ಲಿ ಉಳಿಯುತ್ತಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ದತ್ತಾಂಶದ ಪ್ರಕಾರ, ರಿಮಾಂಡ್ ಕೈದಿಗಳಲ್ಲಿ ದಲಿತರು ಶೇ.19 ಹಾಗೂ ಇತರ ಹಿಂದುಳಿದ ವರ್ಗಗಳು (ಒಬಿಸಿ) ಶೇ.40 ರಷ್ಟಿದ್ದಾರೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ದೀರ್ಘ ನ್ಯಾಯಾಂಗ ಪ್ರಕ್ರಿಯೆಗಳಿಂದ ಹೆಚ್ಚು ಬಾಧಿತವಾಗುತ್ತಿವೆ. ಜಾಮೀನು ಹಣ ಪಾವತಿಸಲು ಅಸಮರ್ಥತೆಯಿಂದ ಅನೇಕರು ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ.
ಶಿಕ್ಷೆ ವಿಧಿಸದೇ ಯಾರನ್ನಾದರೂ ದೀರ್ಘಾವಧಿಗೆ ಜೈಲಿನಲ್ಲಿ ಇರಿಸುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದ್ದು, ಇದು ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಉಮಾಂಗ್ ಸಿಂಘಾರ್ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ವಿಚಾರಣಾಧೀನ ಕೈದಿಗಳ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಜಾಮೀನು ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಸಮಗ್ರ ಜೈಲು ಸುಧಾರಣೆಗಳು ಅಗತ್ಯವೆಂದು ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆವಾಗಿ, ಬಿಜೆಪಿ ಆಡಳಿತದ ರಾಜ್ಯ ಸರ್ಕಾರವು ಕೆಲವು ಅಧಿಕೃತ ಅಂಕಿಅಂಶಗಳು ಮತ್ತು ಕ್ರಮಗಳನ್ನು ಪ್ರಕಟಿಸಿದೆ. ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಭೂ ಅತಿಕ್ರಮಣ ಪ್ರಕರಣಗಳಲ್ಲಿ ಪರಿಶಿಷ್ಟ ಪಂಗಡದ ಸದಸ್ಯರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಮಾರ್ಚ್ 3, 2009ರ ವೇಳೆಗೆ ಪರಿಶಿಷ್ಟ ಪಂಗಡಗಳ ವಿರುದ್ಧ ದಾಖಲಾಗಿದ್ದ 87,549 ಅರಣ್ಯ ಅಪರಾಧ ಪ್ರಕರಣಗಳನ್ನು ಸರ್ಕಾರ ಹಿಂತೆಗೆದುಕೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ದಾಖಲಾಗಿದ್ದ 35,807 ಪ್ರಕರಣಗಳಲ್ಲಿ 28,645 ಪ್ರಕರಣಗಳನ್ನು ಪರಿಹರಿಸಲಾಗಿದ್ದು, 4,396 ಪ್ರಕರಣಗಳು ಇನ್ನೂ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ.
ಅದೇ ರೀತಿ, ನವೆಂಬರ್ 15ರಂದು ಆಚರಿಸಲಾದ ಬುಡಕಟ್ಟು ಹೆಮ್ಮೆಯ ದಿನದಂದು 32 ಕೈದಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅವರಲ್ಲಿ ಒಂಬತ್ತು ಮಂದಿ ಬುಡಕಟ್ಟು ಸಮುದಾಯಗಳಿಗೆ ಸೇರಿದವರು ಎಂದು ಸರ್ಕಾರ ಮಾಹಿತಿ ನೀಡಿದೆ.














