ಬೆಂಗಳೂರು: “ಮಹಾತ್ಮ ಗಾಂಧಿಯ ಹತ್ಯೆ ಒಂದು ಬಾರಿ ಗೋಡ್ಸೆಯಿಂದ ನಡೆದಿದ್ದರೆ, ಇಂದು ಬಿಜೆಪಿಯು ಗಾಂಧಿಯ ಹೆಸರನ್ನೇ ಅಳಿಸುವ ಮೂಲಕ ಅವರನ್ನು ಪದೇಪದೇ ಕೊಲ್ಲುತ್ತಿದೆ. ಮನುಸ್ಮೃತಿಯಿಂದ ಪ್ರೇರಣೆ ಪಡೆಯುವ ಆರ್ಎಸ್ಎಸ್ನ ತತ್ವಾಧಾರಿತ ಮಾರ್ಗದರ್ಶನದಲ್ಲೇ ಬಿಜೆಪಿ ಸರ್ಕಾರ ನಡೆಯುತ್ತಿದೆ” ಎಂದು ಸಿದ್ದರಾಮಯ್ಯ ಹೇಳಿದ್ದರು.
“ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ರದ್ದುಪಡಿಸಿ, ಅದರ ಬದಲಿಗೆ VB-G RAM G ಕಾಯ್ದೆಯನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಯಾವುದೇ ಚರ್ಚೆ ನಡೆಸದೆ, ದೇಶದ ಜನರ ಅಭಿಪ್ರಾಯ ಕೇಳದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಇದು ಪ್ರಜಾಸತ್ತಾತ್ಮಕ ಹಾಗೂ ಫೆಡರಲ್ ವ್ಯವಸ್ಥೆಯ ಮೇಲಿನ ಸಂಪೂರ್ಣ ಅಸಡ್ಡೆಯನ್ನೂ, ಅಧಿಕಾರಶಾಹಿ ಮನಸ್ಥಿತಿಯನ್ನೂ ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
“ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಕೆಲಸದ ಹಕ್ಕು, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಸೇರಿದಂತೆ ಹಕ್ಕು ಆಧಾರಿತ ಕಾನೂನುಗಳ ಮೂಲಕ ನಾಗರಿಕರನ್ನು ಸಬಲಗೊಳಿಸಿತು. MGNREGA ಗ್ರಾಮೀಣ ಭಾರತಕ್ಕೆ ಗೌರವಯುತ ಬದುಕು ಮತ್ತು ಜೀವನೋಪಾಯ ಭದ್ರತೆ ಒದಗಿಸಿದ ಪ್ರಮುಖ ಕಾನೂನಾಗಿತ್ತು
ಡಿಸೆಂಬರ್ 17 ರಂದು ಈ ಹೊಸ ಮಸೂದೆಯನ್ನು ಸಂಸತ್ತಿಗೆ ಮಂಡಿಸಿ, ಡಿಸೆಂಬರ್ 18 ರಂದೇ ಆತುರಾತುರವಾಗಿ ಅಂಗೀಕರಿಸಲಾಯಿತು. ಇಂದು ದೇಶದಲ್ಲಿ 12.16 ಕೋಟಿ MGNREGA ಕಾರ್ಮಿಕರು ಇದ್ದು, ಅವರಲ್ಲಿ 6.21 ಕೋಟಿ ಮಹಿಳೆಯರಿದ್ದಾರೆ. ಶೇ.17ರಷ್ಟು ಅನುಸೂಚಿತ ಜಾತಿ (SC) ಮತ್ತು 11ರಷ್ಟು ಅನುಸೂಚಿತ ಪಂಗಡ (ST) ಸಮುದಾಯದವರು ಇದ್ದಾರೆ. ಕರ್ನಾಟಕದಲ್ಲೇ 71.18 ಲಕ್ಷ ಕಾರ್ಮಿಕರಿದ್ದು, ಅವರಲ್ಲಿ 36.75 ಲಕ್ಷ (ಶೇ.51.6) ಮಹಿಳೆಯರಿದ್ದಾರೆ. ಈ ಎಲ್ಲರ ಜೀವನೋಪಾಯ ಇದೀಗ ಅಪಾಯಕ್ಕೆ ಸಿಲುಕಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಜನಕೇಂದ್ರಿತ ಈ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ಮೋದಿ ಸರ್ಕಾರ ಕಾರ್ಮಿಕರು ಮತ್ತು ರೈತರ ಹಿತಕ್ಕಿಂತ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಮುಂದಿಟ್ಟಿದೆ. MGNREGA ಅಡಿಯಲ್ಲಿ ಗ್ರಾಮೀಣ ಕುಟುಂಬಗಳು ತಮ್ಮದೇ ಹಳ್ಳಿಯಲ್ಲಿ ಕೃಷಿಯೊಂದಿಗೆ ಕೆಲಸ ಮಾಡುತ್ತಾ, ಗ್ರಾಮಾಭಿವೃದ್ಧಿಗೆ ಅಗತ್ಯವಾದ ಆಸ್ತಿಗಳನ್ನು ನಿರ್ಮಿಸುತ್ತಿದ್ದವು. ಮುಖ್ಯವಾಗಿ, ಕೆಲಸಕ್ಕೆ ಕಾನೂನುಬದ್ಧ ಹಕ್ಕು ಇತ್ತು. ಆ ಹಕ್ಕನ್ನೇ ಇದೀಗ ಕಿತ್ತುಕೊಳ್ಳಲಾಗಿದೆ” ಎಂದು ಕಿಡಿಕಾರಿದರು.
“ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಸಾಧನೆ ಎಂದರೆ ಹಿಂದಿನ ಜನಪರ ಯೋಜನೆಗಳಿಗೆ ಹೆಸರು ಬದಲಿಸುವುದು ಅಥವಾ ಅವುಗಳನ್ನು ದುರ್ಬಲಗೊಳಿಸುವುದು. ಸುಮಾರು 30 ಕಲ್ಯಾಣ ಯೋಜನೆಗಳನ್ನು ಬದಲಾಯಿಸಲಾಗಿದ್ದು ಅಥವಾ ರದ್ದುಪಡಿಸಲಾಗಿದ್ದು, ಅವುಗಳ ಮೂಲ ಉದ್ದೇಶವೇ ಹಾಳಾಗಿದೆ” ಎಂದು ಹೇಳಿದರು.
“ಹಿಂದೆ ಪ್ರತಿವರ್ಷ ಕನಿಷ್ಠ 100 ದಿನಗಳ ಕೆಲಸದ ಭರವಸೆ ಇತ್ತು ಮತ್ತು ಕೆಲಸ ಸ್ಥಳೀಯವಾಗಿ ನೀಡಬೇಕಾಗಿತ್ತು. ಹೊಸ ಕಾಯ್ದೆಯ ಸೆಕ್ಷನ್ 5(1) ಪ್ರಕಾರ, ಕೇಂದ್ರ ಸರ್ಕಾರ ಅಧಿಸೂಚನೆ ನೀಡುವ ಪ್ರದೇಶಗಳಲ್ಲಷ್ಟೇ ಕೆಲಸ ಲಭ್ಯವಾಗುತ್ತದೆ. ಗ್ರಾಮ ಪಂಚಾಯತ್ಗಳಿಗೆ ಅಥವಾ ಕಾರ್ಮಿಕರಿಗೆ ಯಾವುದೇ ಖಾತರಿ ಇಲ್ಲ. ಕೃಷಿ ಕಾಲದ ಉಚ್ಚ ಅವಧಿಯಲ್ಲಿ 60 ದಿನಗಳ ಕಾಲ ಕೆಲಸ ನಿರಾಕರಿಸಲಾಗುತ್ತದೆ. ಜೊತೆಗೆ, ವೇತನವನ್ನು ದ್ರವ್ಯೊತ್ತಿಗೆ ಅನುಗುಣವಾಗಿ ಪರಿಷ್ಕರಿಸುವ ವ್ಯವಸ್ಥೆಯನ್ನೂ ತೆಗೆದುಹಾಕಲಾಗಿದೆ” ಎಂದರು.
“MGNREGA ಅಡಿಯಲ್ಲಿ ಕಾರ್ಮಿಕರ ವೇತನದ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಹೊಸ ಕಾಯ್ದೆಯ ಮೂಲಕ ಶೇ.40ರಷ್ಟು ಆರ್ಥಿಕ ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹಾಕಲಾಗಿದ್ದು, ಇದು ಸಂವಿಧಾನದ 258 ಮತ್ತು 280ನೇ ವಿಧಿಗಳಿಗೆ ವಿರುದ್ಧವಾಗಿದೆ. ಜೊತೆಗೆ, 73ನೇ ಸಂವಿಧಾನ ತಿದ್ದುಪಡಿಯಡಿ ಗ್ರಾಮ ಪಂಚಾಯತ್ಗಳಿಗೆ ನೀಡಿದ್ದ ಅಧಿಕಾರಗಳನ್ನು ಕಿತ್ತುಕೊಳ್ಳಲಾಗಿದ್ದು, ಇದು ಫೆಡರಲಿಸಂ ಮತ್ತು ಸ್ಥಳೀಯ ಸ್ವಶಾಸನಕ್ಕೆ ಗಂಭೀರ ಧಕ್ಕೆಯಾಗಿದೆ” ಎಂದು ಹೇಳಿದರು.
ಈ ಅಸಂವಿಧಾನಿಕ ಕಾಯ್ದೆಯನ್ನು ಜಾರಿಗೆ ತರಬಾರದೆಂದು ಡಿಸೆಂಬರ್ 30 ರಂದು ನಾನು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. VB-G RAM G ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, MGNREGA ಅನ್ನು ಮರುಸ್ಥಾಪಿಸಬೇಕು. ಮಹಿಳೆಯರು, ದಲಿತರು, ಆದಿವಾಸಿಗಳಿಗೆ ಉದ್ಯೋಗ ಹಕ್ಕುಗಳನ್ನು ಪುನಃ ನೀಡಬೇಕು ಮತ್ತು ಪಂಚಾಯತ್ಗಳಿಗೆ ಅಧಿಕಾರ ಹಿಂತಿರುಗಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ” ಎಂದು ಹೇಳಿದರು.
“ಈ ಹೊಸ ಕಾಯ್ದೆಯಿಂದ ನಿರುದ್ಯೋಗ ಹೆಚ್ಚಾಗಲಿದೆ, ಮಹಿಳೆಯರ ಕಾರ್ಮಿಕ ಭಾಗವಹಿಸುವಿಕೆ ಕಡಿಮೆಯಾಗಲಿದೆ, ದಲಿತ ಮತ್ತು ಆದಿವಾಸಿ ಕುಟುಂಬಗಳ ಸಂಕಷ್ಟ ಮತ್ತಷ್ಟು ಗಂಭೀರವಾಗಲಿದೆ ಹಾಗೂ ಗ್ರಾಮೀಣ ಆರ್ಥಿಕತೆ ದುರ್ಬಲಗೊಳ್ಳಲಿದೆ. ಪಂಚಾಯತ್ಗಳು ಕೇವಲ ಜಾರಿಗೊಳಿಸುವ ಏಜೆನ್ಸಿಗಳಾಗಿ ಸೀಮಿತಗೊಳ್ಳುತ್ತವೆ; ಗುತ್ತಿಗೆದಾರರು ಮತ್ತು ಕಾರ್ಪೊರೇಟ್ ಶಕ್ತಿಗಳು ಬಲಿಷ್ಠವಾಗುತ್ತವೆ” ಎಂದು ಹೇಳಿದರು.
MGNREGA ಜಾರಿಗೆ ಬಂದಾಗಲೂ ಬಿಜೆಪಿ ವಿರೋಧಿಸಿತ್ತು. ಆಹಾರ ಭದ್ರತಾ ಕಾಯ್ದೆ ಸೇರಿದಂತೆ ಜನಪರ ಕಾನೂನುಗಳನ್ನು ಹಾಸ್ಯಗೊಳಿಸಿತ್ತು. ಬಡವರನ್ನು ಸಬಲಗೊಳಿಸುವ ಕಲ್ಯಾಣ ಕಾನೂನುಗಳನ್ನು ದುರ್ಬಲಗೊಳಿಸುವುದು ಬಿಜೆಪಿಯ ದೀರ್ಘಕಾಲೀನ ಅಜೆಂಡೆಯಾಗಿದೆ” ಕಿಡಿಕಾರಿದರು.














