ಭಾರತ ವಿಶ್ವದ ಶ್ರೇಷ್ಠ ಸಂಸದೀಯ ಪ್ರಜಾಪ್ರಭುತ್ವದ ಸಂವಿಧಾನ ಹೊಂದಿರುವ ರಾಷ್ಟ್ರ. ಸಂವಿಧಾನದ ಸಮ ಸಮಾಜದ ಕನಸುಗಳು ಇದರ ಪೂರ್ವ ಪೀಠಿಕೆ ಮತ್ತು ನಿರ್ದೇಶನ ತತ್ವಗಳಲ್ಲಿ ಅಡಗಿದೆ. ಇವು ಆಳುವ ಸರ್ಕಾರಗಳು ಜಾರಿಗೊಳಿಸುವ ಕಾಯ್ದೆ ಕಾನೂನುಗಳಾಗಿ ರೂಪುಗೊಳ್ಳುವುದರ ಮೇಲೆ ಅಡಕಗೊಂಡಿರುತ್ತವೆ.
ಭಾರತದ ಧಾರ್ಮಿಕ ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮ್ ಸಮುದಾಯಗಳು ಧಾರ್ಮಿಕತೆಯ ನೆಪದಲ್ಲಿ ದೇಶಾದಂತ್ಯ ಪ್ರಮುಖವಾಗಿ ಕರ್ನಾಟಕದಲ್ಲಿ ಸಾಮಾಜಿಕ ಶೋಷಣೆ, ಬಹಿಷ್ಕಾರ, ಹಿಂಸೆ, ಸಾವು, ದೌರ್ಜನ್ಯ, ಅಂಚಿಗೆತಳ್ಳುವಿಕೆ, ಹಕ್ಕು ಮತ್ತು ಅವಕಾಶಗಳ ವಂಚನೆಗೆ ನಿರಂತರವಾಗಿ ಒಳಪಟ್ಟಿದ್ದಾರೆ. ಅಲ್ಲದೆ ದ್ವೇಷ ಭಾಷಣಗಳ ರಾಜಕಾರಣದಿಂದ ನಾಗರೀಕ ಹಕ್ಕುಗಳಿಂದ ವಂಚಿಸಲ್ಪಟ್ಟಿದ್ದಾರೆ.
ಧರ್ಮ, ಭಾಷೆ, ಪ್ರದೇಶ, ಮದುವೆ, ಆಹಾರ, ಪ್ರಾರ್ಥನಾ ಪದ್ಧತಿ, ಸಂಸ್ಕೃತಿ ವಿಧಾನ, ಧಾರ್ಮಿಕ ಆಚರಣೆ, ಉಡುಗೆ ತೊಡಿಗೆ, ರಾಜಕೀಯ ಭಿನ್ನ ಅಭಿಪ್ರಾಯಗಳು ಇಂತಹ ಹಲವಾರು ಕಾರಣಗಳನ್ನು ಬಳಸಿಯೇ ಧಾರ್ಮಿಕ ದೌರ್ಜನ್ಯಗಳ ಹುಟ್ಟಿಗೆ ಧಾರ್ಮಿಕ ದ್ವೇಷ ಭಾಷಣಗಳು ನಿರಂತರವಾಗಿ ಎಗ್ಗಿಲ್ಲದೆ ಸಕ್ರಿವಾಗಿದ್ದು ಫಲವನ್ನು ಉಂಡುತ್ತಿವೆ.
ಧರ್ಮದ್ವೇಷವೇ ಮತ ಬ್ಯಾಂಕ್ಕಾಗಿ ಪರಿವರ್ತನೆಯಾಗುತ್ತಿರುವ, ಏಕಧರ್ಮದ ಸಾಂಸ್ಕೃತಿಕ ರಾಜಕಾರಣವೇ ಪ್ರಭುತ್ವದ ಪಾಲಕ ಸ್ಥಾನದಲ್ಲಿರುವ ಈ ಸಂಧಿಗ್ದಕಾಲಘಟ್ಟದ ನಮ್ಮ ರಾಜ್ಯದಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಾಸೂದೆ-2025 ರನ್ನು ಜಾರಿಗೊಳಿಸುವ ಕಾಂಗ್ರೆಸ್ ಸರ್ಕಾರದ ಪ್ರಯತ್ನ ಮಹತ್ವ ಹಾಗೂ ಸ್ವಾಗತಾರ್ಹದ ಹೆಜ್ಜೆಯಾಗಿದೆ.
ದ್ವೇಷ ಭಾಷಣಗಳು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಈ ಮಸೂದೆ, ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಒಂದು ಐತಿಹಾಸಿಕ ಹೆಜ್ಜೆ. ಇಡೀ ದೇಶಕ್ಕೆ ಆದರ್ಶಪ್ರಾಯ. ಧಾರ್ಮಿಕ ನೆಪದ ಸಂವಿಧಾನ ವಿರೋಧಿ ಕೃತ್ಯಗಳ ತಡೆಗೆ ಈ ಮಸೂದೆ ಜಾರಿಗೊಳಿಸುವುದರ ಮೂಲಕ ಕರ್ನಾಟಕ ಸರ್ಕಾರ ಒಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಇದೆ ಡಿಸೆಂಬರ್ 4 ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡು ಬೆಳಗಾವಿ ಅಧಿವೇಶನದ ವಿಧಾನ ಮಂಡಲದಲ್ಲಿ ಮಂಡಿಸಲಾದ ಈ ಕಾಯ್ದೆಯ ಜಾರಿಗಿರುವ ಅಡೆ ತಡೆಗಳನ್ನು ಮೀರಿ ಇದರ ಸದುದ್ದೇಶ ಸಂಪೂರ್ಣ ಈಡೇರಬಹುದೇ. ಕಾದು ನೋಡಬೇಕಿದೆ.
ಸಾಮಾಜಿಕ ದ್ವೇಷ ಹರಡುವ ಮಾತುಗಳು, ದ್ವೇಷ ಭಾಷಣಗಳು, ಇತರೆ ಧರ್ಮ ಸಮುದಾಯಗಳನ್ನು ಅವಮಾನಿಸುವ, ಉದ್ರೆಕಿಸುವ ಹೇಳಿಕೆಗಳನ್ನು ಯಾವುದೇ ಧರ್ಮ, ಸಮುದಾಯ, ಪಕ್ಷ, ಗುಂಪುಗಳ ಮುಖಂಡರು ನೀಡಿದರೂ ಅವರ ಮೇಲೆ ಈ ಕಾಯ್ದೆಯನ್ನು ನಿರ್ಭೀತಿಯಾಗಿ ಜಾರಿಗೊಳಿಸುವ ಬದ್ಧತೆ, ಧೈರ್ಯ ಸರ್ಕಾರ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಇದೆಯೇ? ವಿಶೇಷವಾಗಿ, ರಾಜ್ಯದಲ್ಲಿ ಈಗಾಗಲೇ ದ್ವೇಷ ಭಾಷಣಗಳ ಸರಣಿ ಪ್ರಕರಣಗಳು ದಾಖಲಾಗಿರುವ ವ್ಯಕ್ತಿಗಳ ವಿರುದ್ಧ ಈ ನೂತನ ಕಾಯ್ದೆಯ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎದೆಗಾರಿಕೆಯನ್ನು ಸರ್ಕಾರ ತೋರಬೇಕು. ಆಗಮಾತ್ರ ಈ ಕಾಯ್ದೆಯ ನೈಜ ಜನಪರ ಕಾಳಜಿ ಸಾಬೀತಾಗಬಹುದು.
ಈ ಕಾನೂನು ದುರ್ಬಲರ ಮೇಲೆ ಮಾತ್ರ ಜಾರಿಯಾಗಿ, ಪ್ರಭಲ ಶಕ್ತಿಶಾಲಿಗಳು ತಪ್ಪಿಸಿಕೊಳ್ಳುವಂತಾಗಬಾರದು. ನಿಜಾರ್ಥದಲ್ಲಿ ಈ ಕಾಯ್ದೆ ಪರಿಣಾಮಕಾರಿ ಯಾಗಬೇಕಾದರೆ, ದ್ವೇಷ ಭಾಷಣ ಮಾಡುವವರ ರಾಜಕೀಯ ಹುದ್ದೆ ನೋಡದೆ ಇವರ ವಿರುದ್ಧ ಕಠಿಣಕ್ರಮ ಜರುಗಿಸಬೇಕು. ಜೊತೆಗೆ ಬಾಧಿತರ ಪುನರ್ವಸತಿ ಮತ್ತು ಪರಿಹಾರಕ್ಕೆ ಸ್ಪಷ್ಟ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ.
ಈ ಮಸೂದೆಯ ಕೆಲ ಅಂಶಗಳು ಸಂವಿಧಾನಬಾಹಿರವಾಗಿ ದುರ್ಬಳಕೆಗೆ ಅವಕಾಶವಾಗುವ ಸಾಧ್ಯತೆಗಳಿವೆ. ಧರ್ಮ, ಸಮುದಾಯಗಳ ಮೇಲೆ ನಡೆಯುವ ವಿಮರ್ಶೆ-ಟೀಕೆಗಳು ಮತ್ತು ದ್ವೇಷದ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಈ ಮಸೂದೆಗೆ ಸಾಧ್ಯವಾಗದಿರಬಹುದು. ಈ ವ್ಯತ್ಯಾಸಗಳನ್ನು ಬಾಲಾಡ್ಯಾರು ತಮ್ಮ ಪರವಾದ ಅನುಕೂಲಾಸ್ತ್ರವಾಗಿ ಬಳಸುವ ಸಾಧ್ಯತೆಗಳು ಸಹ ಇವೆ.
ಈ ಮಸೂದೆಯ ಜಾರಿಯನ್ನು ಬಿಜೆಪಿ ಮತ್ತು ಹಿಂದುತ್ವವಾದಿ ಗುಂಪುಗಳ ಜೊತೆ ಜೆಡಿಎಸ್ ಕೂಡ ಖಂಡಿಸಿದೆ. ವಿಶೇಷವೆಂದರೆ, ಕರವೇ ನಾರಾಯಣ ಗೌಡರು ಸಹ ಈ ಮಸೂದೆ ವಿರುದ್ಧದ ನಿಲುವು ತಾಳಿದ್ದಾರೆ. ಇವರ ಗುಮಾನಿಗಳಿಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ಸಂಘಿಗಳ ಈ ತಿರಸ್ಕಾರ ಸಹಜವೂ ಕೂಡ. ಸಾಮಾನ್ಯವಾಗಿಯೇ ಬಿಜೆಪಿ ಮತ್ತು ಸಂಘಪರಿವಾರಕ್ಕೆ ದ್ವೇಷಭಾಷಣಗಳೇ ಅಧಿಕಾರ ರಾಜಕೀಯದ ಕೇಂದ್ರಬಿಂದುವಾಗಿದೆ. ಇಲ್ಲಿ ಉತ್ಪಾದನೆಯಾಗುವ ಕೋಮು ಗಲಭೆಗಳ ಮೂಲಕವೇ ರಾಜ್ಯದ ಅಧಿಕಾರ ಹಿಡಿದಿದ್ದುಕೂಡ. ಇದನ್ನು ಕಾನೂನಾತ್ಮಕವಾಗಿ ತಡೆಯುವುದೆಂದರೆ ಇವರ ಕೋಮುವಾದಿ ಬತ್ತಳಿಕೆಗಳು ಬರಿದಾಗಿ ದ್ವೇಷ ರಾಜಕಾರಣದ ಬುಡಕ್ಕೆ ಬೆಂಕಿ ಬಿದ್ದಂತೆಯೆ ಸರಿ.
ರಾಜ್ಯದಲ್ಲಿ ಈಗಾಗಲೇ ಇಂತಹ ದ್ವೇಷ ಭಾಷಣ ಮಾಂತ್ರಿಕರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಈ ಸಮಾಜ ಘಾತಕ ವ್ಯಕ್ತಿಗಳಿಗೆ ಹಿಂದುತ್ವದ (ಹಿಂದುಧರ್ಮ ಅಲ್ಲ) ಪಾಲಕರು ಎಂಬ ನೆಪದಲ್ಲಿ, ಅಧಿಕಾರಸ್ತರಿಂದ ಪಕ್ಷಾತೀತವಾಗಿ ಸಹಕಾರ, ರಕ್ಷಣೆ ಸಿಗುತ್ತಿದೆ. ಇದುವರೆಗಿನ ದ್ವೇಷ ಭಾಷಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರಲು ಈಗ ಜಾರಿಯಿರುವ ಕಾನೂನುಗಳ ಪೇಲವ ಪ್ರದರ್ಶನವೆ ಕಾರಣ. ಹೀಗಾಗಿ ಅದಕ್ಕೊಂದು ಪ್ರತ್ಯೇಕ ಕಾನೂನು ತರುವ ರಾಜ್ಯ ಸರ್ಕಾರದ ಉದ್ದೇಶ ಸಮರ್ಥನೀಯ.
ಇದುವರೆಗಿನ ಕಾನೂನುಗಳಲ್ಲಿದ್ದ ಲೋಪದೋಷಗಳನ್ನು ಕಿತ್ತು, ಇವುಗಳನ್ನು ಮತ್ತಷ್ಟು ಸದೃಢ ಗೊಳಿಸಿ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ (ಬರೀ ಮುಸ್ಲಿಮರಲ್ಲದೇ ಕರ್ನಾಟಕದ ನಿವಾಸಿಗಳು ಅಂದರೆ ಎಲ್ಲಾ ಧರ್ಮ ಸಮುದಾಯಗಳು) ಆಧಾರದ ಮೇಲೆ ದ್ವೇಷದ ಮಾತುಗಳನ್ನು ಆಡುವುದು ಅಥವಾ ದ್ವೇಷ ಕೃತ್ಯಕ್ಕೆ ಪ್ರಚೋದನೆ ನೀಡುವುದು, ಕೋಮುಗಲಭೆಗಳನ್ನು ಸೃಷ್ಟಿಸುವುದು ಗಂಭೀರ ಶಿಕ್ಷೆಯಡಿ ತರಲಾಗಿದೆ. ಅಂತಹ ವ್ಯಕ್ತಿಗೆ ಮೊದಲನೇ ಬಾರಿಯ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಈ ಕೃತ್ಯ ಮರುಕಳಿಸಿದರೆ ಹತ್ತು ವರ್ಷಗಳವರೆಗೆ ಶಿಕ್ಷೆ ಇದೆ. ದ್ವೇಷ ಭಾಷಣ ಮೈಕಾಸುರರಿಗೆ ಇದು ನಡುಕದ ಕಾನೂನು. ಈ ದ್ವೇಷಕಾರರು ಹಿಂದು, ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಬುದ್ಧಿಸ್ಟ್, ಪಾರ್ಸಿ, ಲಿಂಗಾಯತ, ಇತರೆ ಯಾರಾದರೂ ಸರಿ, ಎಲ್ಲರಿಗೂ ಅನ್ವಯ.
ಹೊಸ ಮಸೂದೆಯ ಪ್ರಕಾರ ದ್ವೇಷ ಭಾಷಣದ ಪ್ರಕರಣಗಳು ಜೆಎಂಎಫ್ಸಿ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯಲಿವೆ. ಎಸ್ಪಿ ಯವರಿಗೆ ತನಿಖೆಯ ಜವಾಬ್ದಾರಿ ಇರಲಿದೆ. ಯಾವುದೇ ಸಮುದಾಯ ಅಥವಾ ಧರ್ಮವನ್ನು ಗುರಿಯಾಗಿಸಿದ ದ್ವೇಷಭಾಷಣ, ಸಾರ್ವಜನಿಕ ಹೇಳಿಕೆ, ಬರೆಹ, ದೃಶ್ಯ-ಶ್ರವಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮ ಮುಖಾಂತರ ಧರ್ಮ, ಜಾತಿ, ಜನಾಂಗ, ವರ್ಣ, ಭಾಷೆ, ಲಿಂಗ, ಜನ್ಮಸ್ಥಳ ಹಾಗೂ ವಸತಿಯ ಸ್ಥಳಗಳ ಕುರಿತು ವ್ಯಕ್ತಿಗಳ ನಡುವೆ ಅಥವಾ ಗುಂಪುಗಳ ನಡುವೆ ಹಾನಿ, ವಿರಸ, ಹಿಂಸೆಗಳನ್ನು ಪ್ರಚೋದಿಸುವ ದ್ವೇಷವನ್ನು ಹುಟ್ಟಿ ಹಾಕುವ ಕೃತ್ಯಗಳಿಗೆ ಈ ಕಾಯಿದೆ ತಡೆನೀಡಲಿದೆ ಎಂಬುದು ಇದರ ವಿಶೇಷ.
ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಸರ್ವ ಜನಾಂಗದ ಶಾಂತಿಯ ತೋಟವನ್ನು ಮುರಿಯುವ, ಕರುನಾಡನ್ನು ಧರ್ಮದ ನೆಪದಲ್ಲಿ ವಿಚ್ಛಿದ್ರಗೊಳಿಸುವ ಉದ್ದೇಶವುಳ್ಳರಿಗೆ ಈ ಕಾಯಿದೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಪ್ರಯತ್ನ ಕರ್ನಾಟಕದಲ್ಲೇ ಹೀಗಿದ್ದರೆ, ಇನ್ನು ಇಂತಹ ಪ್ರಯೋಗಗಳು ಗುಜರಾತ್, ಉತ್ತರ ಪ್ರದೇಶ, ದೆಹಲಿ, ಬಿಹಾರದಂತಹ ರಾಜ್ಯಗಳಲ್ಲಿ ನಡೆದರೆ.!
ಇದುವರೆಗಿನ ಐಪಿಸಿ ಸೆಕ್ಷನ್ಗಳಲ್ಲಿ ಇದ್ದ ಸಡಿಲ ಕೊಂಡಿಗಳನ್ನು ಕಿತ್ತು ಹಾಕಿ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಅಥವಾ ಲೈಂಗಿಕ ದೃಷ್ಟಿಕೋನದ (ಬರೀ ಮುಸ್ಲಿಮರಲ್ಲದೇ ಕರ್ನಾಟಕದ ನಿವಾಸಿಗಳು ಅಂದರೆ ಎಲ್ಲಾ ಧರ್ಮ ಸಮುದಾಯಗಳು) ಆಧಾರದ ಮೇಲೆ ದ್ವೇಷದ ಮಾತುಗಳನ್ನು ಆಡುವುದು ಅಥವಾ ದ್ವೇಷ ಕೃತ್ಯಕ್ಕೆ ಪ್ರಚೋದನೆ ನೀಡುವುದನ್ನು ಗಂಭೀರ ಶಿಕ್ಷೆಯಡಿ ತರಲಾಗಿದೆ. ಧರ್ಮ, ಸಮುದಾಯ, ವರ್ಣ, ವರ್ಗ, ವೃತ್ತಿ, ಭಾಷೆಗಳ ನಡುವೆ ಬಿರುಕುಗಳ ಸೃಷ್ಟಿಕರ್ತರ ರಾಜಕೀಯ ಯೋಜನೆಗಳಿಗೆ ಈ ಮೂಲಕವಾದರೂ ಕಡಿವಾಣವಾಗಲಿ.
ಜಾತ್ಯತೀತ, ಸರ್ವಜನ ಕಲ್ಯಾಣ, ಸೌಹಾರ್ದತೆ ಈ ನಾಡಿನಲ್ಲಿ ಶಾಶ್ವತಗೊಳ್ಳಲಿ. ಈ ಕಾಯಿದೆಯ ಸಮಗ್ರ ಜಾರಿಗೆ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಮತ್ತಷ್ಟು ಪ್ರಬುದ್ಧವಾಗಲಿ.














